ಮಂಜೇಶ್ವರ: ಉಂರ ತೀರ್ಥಾಟನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿ ಸ್ಕೂಟರ್ ಢಿಕ್ಕಿ ಹೊಡೆದು ಮೃತಪಟ್ಟರು.
ಮಚ್ಚಂಪಾಡಿ ಕೋಡಿ ಹೌಸ್ನ ಅಹಮ್ಮದ್ ಬ್ಯಾರಿ (೭೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಉಂರ ತೀರ್ಥಾಟನೆಗೆ ತೆರಳಲು ಹೊಸಂಗಡಿಯಲ್ಲಿರುವ ಟ್ರಾವೆಲ್ಸ್ ಏಜೆನ್ಸಿಗೆ ಹಣ ಪಾವತಿಸಲೆಂದು ಅಹಮ್ಮದ್ ಬ್ಯಾರಿ ನಿನ್ನೆ ಬೆಳಿಗ್ಗೆ ೧೧.೩೦ರ ವೇಳೆ ಹೊಸಂಗಡಿಗೆ ತೆರಳಿದ್ದರು. ಅಲ್ಲಿ ರಸ್ತೆ ದಾಟುತ್ತಿದ್ದಂತೆ ಅವರಿಗೆ ಸ್ಕೂಟರ್ ಢಿಕ್ಕಿಹೊಡೆದಿತ್ತು. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮರಿಯುಮ್ಮ, ಮಕ್ಕಳಾದ ಅಶ್ರಫ್, ಖದೀಜ, ಆಮಿನ, ಆತಿಕ ಮೊದಲಾದವರನ್ನು ಅಗಲಿದ್ದಾರೆ.