ನಾಲ್ಕರ ಹರೆಯದ ಬಾಲಕನನ್ನು ಕುತ್ತಿಗೆ ಬಿಗಿದು ಕೊಲೆಗೈದ ದೊಡ್ಡಮ್ಮ

ಪಾಲಕ್ಕಾಡ್: ನಾಲ್ಕರ ಹರೆಯದ ಬಾಲಕನನ್ನು ಹತ್ತಿರದ ಸಂಬಂಧಿಕೆಯಾದ ಯುವತಿ ಕುತ್ತಿಗೆ ಬಿಗಿದು ಕೊಲೆಗೈದ ಅತೀ ದಾರುಣ ಕೃತ್ಯ ಪಾಲಕ್ಕಾಡ್‌ನಲ್ಲಿ ನಡೆದಿದೆ.  ಪಾಲಕ್ಕಾಡ್ ಕೊಳಿಂಞಂಬಾರವಣ್ಣಾ ಮಡ ಎಂಬಲ್ಲಿ ಈ ಭೀಕರ ಕೃತ್ಯ ನಡೆದಿದೆ. ಇಲ್ಲಿನ ಮಧುಸೂದನನ್- ಆದಿರ ದಂಪತಿಯ ಪುತ್ರ ಋತ್ವಿಕ್ ಕೊಲೆಗೈಯ್ಯಲ್ಪಟ್ಟ ಬಾಲಕನಾಗಿದ್ದಾನೆ. ಮಧುಸೂದನನ್‌ರ ಅಣ್ಣ ಬಾಲಕೃಷ್ಣನ್‌ರ ಪತ್ನಿ ದೀಪ್ತಿದಾಸ್ (೨೯) ಎಂಬಾಕೆ ಈ ಬಾಲಕನನ್ನು ಕೊಲೆಗೈದಿರುವುದಾಗಿ ದೂರಲಾಗಿದೆ. ಬಾಲಕನನ್ನು ಕೊಲೆಗೈದ ಬಳಿಕ ದೀಪ್ತಿದಾಸ್ ಸ್ವತಃ ತನ್ನ ದೇಹಕ್ಕೂ ಗಾಯ ಮಾಡಿಕೊಂಡಿದ್ದಾಳೆ. ನಿನ್ನೆ ರಾತ್ರಿ ಈ ದಾರುಣ ಘಟನೆ ನಡೆದಿದೆ. ಮಧುಸೂದನನ್‌ರ ತಾಯಿ ಪದ್ಮಾವತಿಯನ್ನು ಅಸೌಖ್ಯ ನಿಮಿತ್ತ ಕೊಳಿಂಞಂಬಾರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದರಿಂದ ಆದಿರ ಪುತ್ರ ಋತ್ವಿಕ್‌ನನ್ನು ದೀಪ್ತಿಯ ಜತೆಗೆ ಬಿಟ್ಟು ಆಸ್ಪತ್ರೆಗೆ ತೆರಳಿದ್ದರು. ರಾತ್ರಿ ೧೦ ಗಂಟೆ ಬಳಿಕ ಮರಳಿದಾಗ ಮನೆಗೆ ಬಾಗಿಲು ಹಾಕಲಾಗಿತ್ತು. ಬಾಗಿಲು ತಟ್ಟಿದರೂ ತೆರೆಯಲಿಲ್ಲ. ಅನಂತರ ದೀಪ್ತಿಯ ಮಗಳು ಮನೆಯ ಹಿಂಬಾಗಿಲು ತೆರೆದಿದ್ದಾಳೆ. ಆ ಮೂಲಕ ಆದಿರ ಮನೆಯೊಳಗೆ ಪ್ರವೇಶಿಸಿದ್ದು, ಈ ವೇಳೆ ಋತ್ವಿಕ್ ನಿಶ್ಯಬ್ದವಾಗಿ ಮಲಗಿರುವುದು ಕಂಡು ಬಂದಿದೆ. ಸಮೀಪದಲ್ಲಿ ದೀಪ್ತಿದಾಸ್ ಬಚ್ಚಿಟ್ಟುಕೊಂಡಿದ್ದು ಆಕೆಯ ದೇಹದಲ್ಲಿ ರಕ್ತ ಹರಿಯುತ್ತಿರುವುದು ಕಂಡು ಬಂದಿದೆ. ಕೂಡಲೇ ಋತ್ವಿಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ  ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಋತ್ವಿಕ್‌ನನ್ನು ದೀಪ್ತಿದಾಸ್ ಕುತ್ತಿಗೆ ಬಿಗಿದು ಕೊಲೆಗೈದಿರುವುದಾಗಿ ತಿಳಿದು ಬಂದಿದೆ. ದೇಹಕ್ಕೆ ಗಾಯಗೊಂಡು ರಕ್ತ ಸೋರುತ್ತಿರುವ ದೀಪ್ತಿದಾಸ್‌ಳನ್ನು ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ಈಕೆಗೆ ಮಾನಸಿಕ ಅಸ್ವಸ್ಥೆಯಿರುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page