ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣ: ರಿಮಾಂಡ್‌ನಲ್ಲಿದ್ದ ಆರೋಪಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ

ಉಪ್ಪಳ: ಯುವಕನನ್ನು ಗಲ್ಫ್‌ನಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿಕೊಂಡೊಯ್ದು ಮರಕ್ಕೆ ತೂಗುಹಾಕಿ  ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಪೈವಳಿಕೆ ನಿವಾಸಿಯೂ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತನನ್ನು ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯ ಮೂರು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ.

೨೦೨೨ ಜೂನ್ ೨೬ರಂದು ಪುತ್ತಿಗೆ ಮುಗುವಿನ ಅನಿವಾಸಿಯಾದ ಅಬೂ ಬಕರ್ ಸಿದ್ದಿಕ್‌ರನ್ನು  ಅಪಹರಿಸಿ ಕೊಂಡೊಯ್ದು ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ನೂರ್‌ಶ ಆರೋಪಿಯಾಗಿ ದ್ದಾನೆ. ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸುವುದರೊಂದಿಗೆ ಈತ ನೇಪಾಳಕ್ಕೆ  ಪರಾರಿಯಾಗಿದ್ದನು. ಕೆಲವು ದಿನಗಳ ಹಿಂದೆ ಊರಿಗೆ ಮರಳಿ ಬಂದ ಈತ ಹೈಕೋರ್ಟ್‌ನಲ್ಲಿ  ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನ. ಆದರೆ ನಿರೀಕ್ಷಣಾ ಜಾಮೀನು ನಿಷೇಧಿಸಿ ನ್ಯಾಯಾಲಯ ಹತ್ತು ದಿನಗಳೊಳಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಶರಣಾಗಬೇಕೆಂದು ನಿರ್ದೇಶಿಸಿತು. ಇದರಂತೆ ಠಾಣೆಯಲ್ಲಿ ಶರಣಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ರಿಮಾಂ ಡ್‌ನಲ್ಲಿರಿಸಲಾಗಿತ್ತು.

ಅಬೂಬಕರ್ ಸಿದ್ದಿಕ್ ಕೊಲೆಗೀಡಾದ ಪ್ರಕರಣದಲ್ಲಿ ಒಟ್ಟು ೧೯ ಮಂದಿ ಆರೋಪಿಗಳಿದ್ದು, ಇನ್ನೂ ಆರು ಮಂದಿಯನ್ನು ಸೆರೆಹಿಡಿಯಲು ಬಾಕಿಯಿದೆ.  ಇದೀಗ ರಿಮಾಂಡ್‌ನಿಂದ ಕಸ್ಟಡಿಗೆ ತೆಗೆದ ಆರೋಪಿಯನ್ನು ಪೊಲೀಸರು ವಿವಿಧೆಡೆಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page