ಅಡುಗೆ ಕಾರ್ಮಿಕನಿಗೆ ಅಸೌಖ್ಯ: ಸಂಕಷ್ಟ ಸ್ಥಿತಿಯಲ್ಲಿರುವ ಕುಟುಂಬದಿಂದ ಚಿಕಿತ್ಸೆಗಾಗಿ ಸಹಾಯ ಯಾಚನೆ

ಕುಂಬಳೆ: ವಿವಿಧ ಹೋಟೆಲ್ ಗಳಲ್ಲಿ ಅನೇಕ ವರ್ಷಗಳಿಂದ ಅಡುಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಈಗ ಅಸೌಖ್ಯ ನಿಮಿತ್ತ ಸಂಕಷ್ಟ ಕ್ಕೀಡಾಗಿದ್ದಾರೆ. ಪುತ್ತಿಗೆ ಎಡನಾಡು ಸಜಂಕಳ ನಿವಾಸಿ ವಿಶ್ವನಾಥ (38) ಅಸೌಖ್ಯ ತಗಲಿ ಕೆಲಸ ಮಾಡಲು ಸಾಧ್ಯವಾಗದೆ ಸಮಸ್ಯೆಗೀಡಾದವರು. ಇದರಿಂದ ಕೆಲಸವಿಲ್ಲದೆ ಕುಟುಂಬ ಸಂಕಷ್ಟಕ್ಕೀಡಾಗಿದೆ. ಕಾಲುನೋವಿನಿಂದ ಬಳಲುತ್ತಿರುವ ಇವರು ವಿವಿಧ ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದರಾದರೂ ಎಲುಬು ಸವೆತ ಮತ್ತು ನರಗಳ ದೌರ್ಬಲ್ಯಗಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸುಮಾರು 6 ಲಕ್ಷ ರೂ. ವೆಚ್ಚ ತಗಲಬಹುದೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಬಡ ಕುಟುಂಬದವರಾದ ವಿಶ್ವನಾಥರು ಪತ್ನಿ, ಪುತ್ರನೊಂದಿಗೆ ವಾಸಿಸುತ್ತಿದ್ದು, ಈ ಮೊತ್ತ ಸಂಗ್ರಹಿಸಲು ಕುಟುಂಬಕ್ಕೆ ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಹೃದಯ ದಾನಿಗಳ ನೆರವು ಕುಟುಂಬ ನಿರೀಕ್ಷಿಸಿದೆ. ಸಹಾಯ ಮಾಡಲು ಆಸಕ್ತಿ ಇರುವವರು ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ ಶಾಖೆಯ ಖಾತೆ ನಂಬ್ರ 40417101064412 (ಐಎಫ್ಎಸ್ಸಿ- ಕೆಎಲ್ಜಿಬಿ 004041)ಕ್ಕೆ ನೆರವು ನೀಡಲು ಕುಟುಂಬ ವಿನಂತಿಸಿದೆ.

Leave a Reply

Your email address will not be published. Required fields are marked *

You cannot copy content of this page