ಆಸ್ಪತ್ರೆಗೆ ತಲುಪುವವರಲ್ಲಿ ಮಾನವೀಯತೆಯಿಂದ ವ್ಯವಹರಿಸಲು ಮಾನವಹಕ್ಕು ಆಯೋಗ ನಿರ್ದೇಶ
ಕಾಸರಗೋಡು: ಆಸ್ಪತ್ರೆಗಳ ಕ್ಯಾಶ್ವಾಲಿಟಿಗಳಲ್ಲೂ ಹಾಗೂ ಇತರ ಕಡೆಗಳಲ್ಲೂ ನೇಮಕ ಮಾಡುವ ಸೆಕ್ಯೂರಿಟಿ ನೌಕರರು, ನರ್ಸ್ಗಳು ಸಹಿತದ ನೌಕರರು ರೋಗಿಗಳೊಂದಿಗೆ ಹಾಗೂ ಜೊತೆಗಿರುವವರೊಂದಿಗೆ ಮಾನವೀಯ ರೀತಿಯಲ್ಲಿ ವ್ಯವಹರಿಸಬೇಕೆಂದು ಎಲ್ಲಾ ಸರಕಾರಿ ಆಸ್ಪತ್ರೆಗಳ ಸುಪರಿಂಟೆಂಡರಿಗೆ ನಿರ್ದೇಶ ನೀಡಬೇಕೆಂದು ಮಾನವಹಕ್ಕು ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ಜಿಲ್ಲಾ ಮೆಡಿಕಲ್ ಆಫೀಸರ್ರಿಗೆ ನಿರ್ದೇಶಿಸಿದ್ದಾರೆ.
ರೋಗದ ಹಾಗೂ ರೋಗಿಯ ಅವಸ್ಥೆಯನ್ನು ತಿಳಿದುಕೊಂಡು ತುರ್ತು ಚಿಕಿತ್ಸೆ ಲಭ್ಯಗೊಳಿಸಲಿರುವ ಸಹಾಯ ಮಾಡಲು ನೌಕರರು ಎಂದೂ ಸನ್ನದ್ಧರಾಗಿರಬೇಕೆಂದು ಆಯೋಗ ಆಗ್ರಹಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ನೋವು ಸಹಿತ ತಲುಪಿದ ಯುವತಿ ಹಾಗೂ ಜೊತೆಗಿದ್ದವರೊಂದಿಗೆ ಅಪ ಮರ್ಯಾದೆಯಿಂದ ವ್ಯವಹರಿಸಿದರೆಂಬ ದೂರಿನಲ್ಲಿ ಸೆಕ್ಯೂರಿಟಿ ನೌಕರರು ಹಾಗೂ ನರ್ಸ್ಗಳ ಭಾಗದಿಂದ ಕರ್ತವ್ಯಲೋಪ ಉಂಟಾಗಿದೆ ಎಂದು ಆಯೋಗ ಪತ್ತೆ ಮಾಡಿದೆ. ಈ ರೀತಿಯ ಘಟನೆಗಳು ಆಸ್ಪತ್ರೆಯಲ್ಲಿ ಯಾವುದೇ ಸಂದರ್ಭದಲ್ಲಿ ಉಂಟಾಗಬಾರದೆಂದು ಕೆ. ಬೈಜುನಾಥ್ ನಿರ್ದೇಶಿಸಿದರು. ಚೇರೂರಿನ ಸಿ.ಎಚ್. ಸಿದ್ದಿಕ್ ಸಲ್ಲಿಸಿದ ದೂರಿನಲ್ಲಿ ಈ ಕ್ರಮ ಉಂಟಾಗಿದೆ.
೨೦೨೨ ಸೆಪ್ಟಂಬರ್ ೬ರಂದು ದೂರಿಗೆ ಆಸ್ಪದವಾದ ಘಟನೆ ಸಂಭವಿಸಿತ್ತು. ಒಪಿ ಟಿಕೆಟ್ ತೆಗೆದರೆ ಮಾತ್ರವೇ ಆಸ್ಪತ್ರೆಗೆ ಪ್ರವೇಶಿಸಲು ಅನುಮತಿ ನೀಡುವುದಾಗಿ ನೌಕರರು ನಿಲುವು ತಳೆದಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಹೆರಿಗೆ ನಡೆಸಲಾಗಿತ್ತು. ಆದರೆ ಈ ಆರೋಪವನ್ನು ಡಿಎಂಒ ನಿಷೇಧಿಸಿದ್ದಾರೆ.