ಇಡಿಯಡ್ಕ ದೇವಸ್ಥಾನದಲ್ಲಿ ಮೇ ೫ರಂದು ರಾಷ್ಟ್ರವಿಜಯ ಯಜ್ಞ, ಪವಮಾನ ಹೋಮ
ಪೆರ್ಲ: ರಾಷ್ಟ್ರವಿಜಯ ಯಜ್ಞ ಸಮಿತಿ ಪೆರ್ಲ ಇದರ ನೇತೃತ್ವದಲ್ಲಿ ಮೇ ೫ರಂದು ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ರಾಷ್ಟ್ರವಿಜಯ ಯಜ್ಞ ಹಾಗೂ ಪವಮಾನ ಹೋಮ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ 82 ಸಂವತ್ಸರಗಳನ್ನು ಪೂರೈಸಿರುವ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಯಜ್ಞ ಹಾಗೂ ಹೋಮ ನಡೆಸಲಾಗುವುದು. ಅಂದು ಬೆಳಿಗ್ಗೆ 10.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮತ್ತೂರು ವೇ|ಮೂ| ಶ್ರೀ ಚೆನ್ನಕೇಶವ ದೀಕ್ಷಿತರು, ಮಂಗೇಶ ಭೇಂಡೆ ಮೊದಲಾದವರು ಉಪಸ್ಥಿತರಿರುವರು. 11.45ಕ್ಕೆ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.