ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಮಾಜಿ ಡಿವೈಎಫ್ಐ ನೇತಾರೆ ವಿರುದ್ಧ ಇನ್ನೊಂದು ಕೇಸು ದಾಖಲು
ಬದಿಯಡ್ಕ: ಉದ್ಯೋಗ ದೊರಕಿ ಸಿಕೊಡುವುದಾಗಿ ಭರವಸೆಯೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಲಾಯಿತೆಂಬ ಆರೋಪದಂತೆ ಮಾಜಿ ಡಿವೈಎಫ್ಐ ನೇತಾರೆಯಾದ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲಾಗಿದೆ. ಬಾಡೂರು ನಿವಾಸಿ ಸಂಕಪ್ಪ ಪೂಜಾರಿಯವರ ಪುತ್ರ ಮಲ್ಲೇಶ್ (34) ನೀಡಿದ ದೂರಿನಂತೆ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರು ವಂಚನೆ ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಮಲ್ಲೇಶ್ರಿಂದ 2.50 ಲಕ್ಷ ರೂಪಾ ಯಿಗಳನ್ನು ಸಚಿತಾ ರೈ ಆಗ್ರಹಪಟ್ಟಿದ್ದಳೆಂದು ತಿಳಿಸಲಾಗಿದೆ. ಈ ಪೈಕಿ 1 ಲಕ್ಷ ರೂಪಾಯಿಯನ್ನು 2023 ಅಕ್ಟೋಬರ್ 13ರಂದು ಮಲ್ಲೇಶ್ ನೀಡಿದ್ದರೆನ್ನಲಾಗಿದೆ. ಅನಂತರ ಬಾಕಿ ಹಣಕ್ಕಾಗಿ ಸಚಿತಾ ರೈ ಬೇಡಿಕೆ ಮುಂದಿರಿಸಿದ್ದಳೆಂದೂ, ಆದರೆ ಉದ್ಯೋಗ ಲಭಿಸಿದ ಬಳಿಕ ಆ ಮೊತ್ತವನ್ನು ನೀಡುವುದಾಗಿ ಮಲ್ಲೇಶ್ ತಿಳಿಸಿದ್ದರೆನ್ನಲಾಗಿದೆ. ಇದೇ ವೇಳೆ ಸಚಿತಾ ರೈ ವಿರುದ್ಧ ಕುಂಬಳೆ ಠಾಣೆಯಲ್ಲಿ ವಂಚನೆ ಕೇಸು ದಾಖಲಾದ ಹಿನ್ನೆಲೆಯಲ್ಲಿ ಮಲ್ಲೇಶ್ ಕೂಡಾ ಆಕೆಯ ವಿರುದ್ಧ ಬದಿ ಯಡ್ಕ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೇ ಸಂದರ್ಭ ದಲ್ಲಿ ಇನ್ನೊಂದು ದೂರು ಕೂಡಾ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸರಿಗೆ ಲಭಿಸಿರುವುದಾಗಿ ತಿಳಿಸಲಾಗಿದೆ. ಬದಿಯಡ್ಕ ಪಳ್ಳತ್ತಡ್ಕ ಬಳಿಯ ಬಳ್ಳಂಬೆಟ್ಟುವಿನ ಶ್ವೇತ (31) ಎಂಬವರಿಂದ ಎರಡೂವರೆ ಲಕ್ಷ ರೂಪಾಯಿ ಸಚಿತಾ ರೈ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಈ ಹಣವನ್ನು ಸಚಿತಾ ರೈ ಪಡೆದುಕೊಂಡಿದ್ದಳೆನ್ನಲಾಗಿದೆ. ಕಳೆದ ಸೆ. 21ರಂದು ಹಣವನ್ನು ಸಚಿತಾ ರೈಯ ಬ್ಯಾಂಕ್ ಖಾತೆಗೆ ಪಾವತಿಸಿರುವುದಾಗಿ ಶ್ವೇತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.