ಕಣ್ಣೂರಿನ ಆಸ್ಪತ್ರೆ ಮಾಲಕನ ಪುತ್ರ ವಿರಾಜಪೇಟೆ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕಣ್ಣೂರಿನ ಕೊಯ್ಲಿ ಆಸ್ಪತ್ರೆ ಮಾಲಕನ ಪುತ್ರ ಕರ್ನಾಟಕದ ವಿರಾಜಪೇಟೆ ಬಳಿ ಬಿ ಶೆಟ್ಟಗೇರಿ ಎಂಬಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಯ್ಲಿ ಆಸ್ಪತ್ರೆಯ ಮಾಲಕ ದಿ| ಕೊಯ್ಲಿ ಭಾಸ್ಕರನ್ರ ಪುತ್ರ ಪ್ರದೀಪ್ ಕೊಯ್ಲಿ (49) ಮೃತಪಟ್ಟ ವ್ಯಕ್ತಿ. ಮೃತದೇಹದ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿದೆ. ಇದರಿಂದ ಇದು ಕೊಲೆಕೃತ್ಯವಾಗಿರ ಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ರದೀಪ್ರಿಗೆ ಅಲ್ಲಿ 32 ಎಕ್ರೆಯಷ್ಟು ಕಾಫಿ ತೋಟವಿದೆ. ಅದನ್ನು ಮಾರಾಟಗೈಯ್ಯುವ ಪ್ರಯತ್ನದಲ್ಲಿ ಅವರು ತೊಡಗಿದ್ದರೆ ನ್ನಲಾಗಿದೆ. ಅವಿವಾಹಿತನಾದ ಪ್ರದೀಪ್ ತೋಟದಲ್ಲಿರುವ ಒಂದು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ತಾಯಿ ಶಾಂತ, ಸಹೋದರಿ ಪ್ರೀತ ಎಂಬಿವರನ್ನು ಅಗಲಿದ್ದಾರೆ.