ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ.ನಷ್ಟು ಕಾಳಧನ ಪತ್ತೆ: ಓರ್ವ ವಶ
ಕಾಸರಗೋಡು: ದೀರ್ಘ ಕಾಲದ ಬಿಡುವಿನ ನಂತರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಕಾಳಧನ ಪತ್ತೆಹಚ್ಚಿದ್ದಾರೆ.
ಇಂದು ಬೆಳಿಗ್ಗೆ ಸುಮಾರು ೮.೩೦ರ ವೇಳೆ ಕಾಸರಗೋಡು- ಹೊಸದುರ್ಗ ಕೆಎಸ್ಟಿಪಿ ರಸ್ತೆಯಲ್ಲಿ ಬೇಕಲಕ್ಕೆ ಸಮೀಪದ ತೃಕ್ಕನ್ನಾಡ್ನಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್ಪಿ ಎ.ವಿ.ಮನೋಜ್, ಬೇಕಲ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎ.ಶೈನ್, ಎಸ್ಐಗಳ ನೇತೃತ್ವದಲ್ಲಿ ತೃಕ್ಕನ್ನಾಡ್ ಬಳಿ ಇಂದು ಬೆಳಿಗ್ಗೆ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ನೋಡಿದಾಗ ಅದರಲ್ಲಿ ಕಾಳಧನ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಮೇಲ್ಪರಂಬ ನಿವಾಸಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಶ್ನಿಸತೊಡಗಿದ್ದಾರೆ. ವಶಪಡಿಸಿದ ನೋಟುಗಳ ಕಂತೆಗಳನ್ನು ಪೊಲೀಸರು ಎಣಿಸತೊಡಗಿದ್ದು, ಅದು ಪೂರ್ಣಗೊಂಡ ಬಳಿಕವಷ್ಟೇ ಅದರಲ್ಲಿದ್ದ ಹಣದ ನಿಖರ ಸಂಖ್ಯೆ ತಿಳಿದುಕೊಳ್ಳಲು ಸಾಧ್ಯ. ಆ ಬಳಿಕವಷ್ಟೇ ಈ ವಿಷಯದಲ್ಲಿ ಅಗತ್ಯದ ಮುಂದಿನ ಕ್ರಮದತ್ತ ಸಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಹಣವನ್ನು ಎಲ್ಲಿಂದ, ಎಲ್ಲಿಗೆ ಮತ್ತು ಯಾತಕ್ಕಾಗಿ ಸಾಗಿಸಲಾಗು ತ್ತಿತ್ತೆಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.