ಕಾವುನಲ್ಲಿ ಬೈಕ್-ಬಸ್ ಢಿಕ್ಕಿ : ವರ್ಕಾಡಿ ನಿವಾಸಿ ಯುವಕ ಮೃತ್ಯು
ವರ್ಕಾಡಿ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಬೈಕ್-ಕೆಎಸ್ಆರ್ಟಿಸಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವರ್ಕಾಡಿ ಬದಿಮಲೆ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ನಿನ್ನೆ ನಡೆದಿದೆ. ಬದಿಮಲೆ ನಿವಾಸಿ ಮೊಯ್ದೀನ್ಕುಂಞಿ ಎಂಬವರ ಪುತ್ರ ಅಶ್ರಫ್ (25) ಮೃತ ಯುವಕ. ಇವರು ನಿನ್ನೆ ಬೆಳಿಗ್ಗೆ ಪಾತೂರಿನಿಂದ ಬಸ್ನಲ್ಲಿ ಪುತ್ತೂರಿಗೆ ತೆರಳಿದ್ದರು. ಮಡಿಕೇರಿಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಹೊಂದಿದ್ದ ಇವರು ಪುತ್ತೂರಿನ ಗ್ಯಾರೇಜ್ನಲ್ಲಿದ್ದ ಬುಲ್ಲೆಟ್ ಬೈಕ್ನಲ್ಲಿ ಮಡಿಕೇರಿಯತ್ತ ಸಂಚರಿಸುತ್ತಿದ್ದಾಗ ಕಾವುನಲ್ಲಿ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಇವರನ್ನು ಆಸ್ಪತ್ರೆಗೆ ಕೊಂಡು ಹೋದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಇವರ ತಾಯಿ ನಬೀಸ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ತಂದೆ, ಸಹೋದರ ಸಂಶುದ್ದೀನ್, ಸಹೋದರಿಯರಾದ ಖದೀಜತ್ ಖುಬ್ರ, ಶಂಸಿದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹ ಅಂತ್ಯಕ್ರಿಯೆ ನಿನ್ನೆ ಮನೆ ಪರಿಸರದ ಪಾತೂರು ಮಸೀದಿಯಲ್ಲಿ ನಡೆಸಲಾಗಿದೆ.