ಕುಂಬಳೆಯಲ್ಲಿ ಮತ್ತೆ ಕಳ್ಳರ ಹಾವಳಿ: ಅಂಗಡಿಯ ಶಟರ್ ಮುರಿದು ಎರಡು ಗೋಣಿ ಕಾಳುಮೆಣಸು ಕಳವು

ಕುಂಬಳೆ:  ಅಲ್ಪ ಬಿಡುವಿನ ಬಳಿಕ ಕುಂಬಳೆ ಪೇಟೆಯಲ್ಲಿ ಮತ್ತೆ ಕಳ್ಳತನ ನಡೆದಿದೆ.

ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಸಮೀಪ ಲೀಗ್ ಆಫೀಸ್‌ನ ಕೆಳಗೆ ಕಾರ್ಯಾಚರಿಸುವ ಕೆಎನ್‌ಬಿ ಟ್ರೇಡರ್ಸ್‌ನಲ್ಲಿ ಈ ಕಳವು ನಡೆದಿದೆ. ಎರಡು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಕಾಳುಮೆಣಸು ಹಾಗೂ ಡ್ರವರ್‌ನಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಅಂಗಡಿಯ ಮಾಲಕ ಕಳತ್ತೂರು ನಿವಾಸಿ ಯಾಕೂಬ್  ಇಂದು ಬೆಳಿಗ್ಗೆ ತಲುಪಿದಾಗ ಅಂಗಡಿಯ ಶಟರ್ ಮುರಿದಿರುವುದು  ಕಂಡುಬಂದಿದೆ. ಬಳಿಕ ನಡೆದ ಪರಿಶೀಲನೆ ವೇಳೆ ಕಾಳುಮೆಣಸು ಹಾಗೂ ಹಣ ಕಳವಿಗೀಡಾಗಿರುವುದು ತಿಳಿದುಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ  ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದ ಬಳಿಕವೇ ಹೆಚ್ಚಿನ ಮಾಹಿತಿ ಲಭಿಸಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಅಲ್ಪ ಬಿಡುವಿನ ಬಳಿಕ ಮತ್ತೆ ಕುಂಬಳೆ ಪೇಟೆಯಲ್ಲಿ ಕಳವು ನಡೆದಿರುವುದು ವ್ಯಾಪಾರಿಗಳು ಹಾಗೂ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಕೆಲವು ತಿಂಗಳ ಹಿಂದೆ  ಕುಂಬಳೆ ಪೇಟೆ ಸಹಿತ ಸಮೀಪ ಪ್ರದೇಶಗಳಲ್ಲಿ ಹಲವು ಕಳವು ನಡೆದಿತ್ತು.  ಇದರಿಂದ ಪೊಲೀಸರು ರಾತ್ರಿ ಹೊತ್ತಿನಲ್ಲಿ ಜಾಗ್ರತೆ ತೀವ್ರಗೊಳಿಸಿರುವುದರಿಂದ ಕಳ್ಳರ ಹಾವಳಿ ಕಡಿಮೆಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page