ಕೇರಳ ಯೂತ್ ಫ್ರಂಟ್(ಎಂ)ನ ಕರಾವಳಿ ಸಂರಕ್ಷಣೆ ಯಾತ್ರೆಗೆ ಚಾಲನೆ
ಕಾಸರಗೋಡು: ಮೀನುಗಾರಿಕಾ ವಲಯದಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಬೇಕೆಂದು ಕೇರಳ ಕಾಂಗ್ರೆಸ್ (ಎಂ) ಚೆಯರ್ಮೆನ್ ಸಂಸದ ಜೋಸ್ ಕೆ. ಮಾಣಿ ಒತ್ತಾಯಿಸಿದ್ದಾರೆ. ಕೇರಳ ಯೂತ್ ಫ್ರಂಟ್(ಎಂ) ರಾಜ್ಯಾಧ್ಯಕ್ಷ ಸಿರಿಯಕ್ ಚಾಳಿಕ್ಕಾಡನ್ ನೇತೃತ್ವದಲ್ಲಿ ನಡೆಯುವ ಕರಾವಳಿ ಸಂರಕ್ಷಣೆ ಯಾತ್ರೆಯನ್ನು ಕಾಸರಗೋಡು ಕಡಪ್ಪುರ ಶ್ರೀ ಕುರುಂಬಾ ಭಗವತಿ ಕ್ಷೇತ್ರ ಪರಿಸರದಲ್ಲಿ ಯಾತ್ರೆಯ ನಾಯಕನಿಗೆ ಧ್ವಜ ಹಸ್ತಾಂತರಿಸಿ, ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೀನು ಕಾರ್ಮಿಕರಿಗೆ ಕರಾವಳಿ ಪ್ರದೇಶದ ಹಕ್ಕು ಪೂರ್ಣವಾಗಿ ಬಿಟ್ಟುಕೊಡಬೇಕು. ಸರಿಯಾದ ಅಧ್ಯಯನ ನಡೆಸದೆ ಸಮುದ್ರ ಹೊಯ್ಗೆ ಗಣಿಗಾರಿಕೆ ನಡೆಸುವುದರಿಂದ ಕರಾವಳಿ ಜನತೆಯ ಜೀವ ಹಾಗೂ ಸೊತ್ತಿಗೆ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದರು.
ಸಮುದ್ರದ ಹೊಯ್ಗೆ ಗಣಿಗಾರಿಕೆ ಕುರಿತು ಅಧ್ಯಯನ ನಡೆಸಲಾಗಿದೆಯೇ ಎಂಬುದಾಗಿ ತಾನು ರಾಜ್ಯ ಸಭೆಯಲ್ಲಿ ಪ್ರಶ್ನಿಸಿದರೂ ಕೇಂದ್ರ ಸರಕಾರದಿಂದ ಸೂಕ್ತ ಉತ್ತರ ಲಭಿಸಿಲ್ಲ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿರಿಯಕ್ ಚಾಳಿಕ್ಕಾಡನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಕುರುಂಬಾ ಭಗವತೀ ಕ್ಷೇತ್ರದ ಅಧ್ಯಕ್ಷ ಕೆ. ಪ್ರಭಾಕರನ್ ಮುಖ್ಯ ಅತಿಥಿಯಾಗಿದ್ದರು. ಕೇರಳ ಕಾಂಗ್ರೆಸ್ (ಎಂ) ನೇತಾರರಾದ ಅಲೆಕ್ಸ್ ಕೋಳಿಮಲ, ಕುರ್ಯಾಕೋಸ್ ಪ್ಲಾಪರಂಬಿಲ್ ಮೊದಲಾದವರು ಮಾತನಾಡಿದರು. ರಾಜ್ಯದಲ್ಲಿ ೯ ಕರಾವಳಿ ಜಿಲ್ಲೆಗಳ ಮೀನುಗಾರಿಕಾ ಪ್ರದೇಶಗಳನ್ನು ಸಂಪರ್ಕಿಸಿ ಸಂಚರಿಸುವ ಯಾತ್ರೆ ಈ ತಿಂಗಳ ೯ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಲಿದೆ. ಸಚಿವ ರೋಷಿ ಅಗಸ್ಟಿನ್, ಮಾಜಿ ಸಂಸದ ಥೋಮಸ್ ಚಾಳಿಕ್ಕಾಡನ್, ಶಾಸಕರಾದ ಎನ್. ಜಯರಾಜ್, ಜೋಬ್ ಮೈಕಲ್, ಪ್ರಮೋದ್ ನಾರಾಯಣನ್ ಸೆಬಾಸ್ಟಿಯನ್ ಕುಳತ್ತುಂಗಾಲ್, ಸ್ಟೀಫನ್ ಜೋರ್ಜ್ ಮೊದಲಾದವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.