ಟೋಲ್ ಬೂತ್ ವಿರುದ್ಧ ಪ್ರತಿಭಟನೆ : ಕುಂಬಳೆಯಲ್ಲಿ ಬೃಹತ್ ದೊಂದಿ ಮೆರವಣಿಗೆ
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ಸ್ಥಾಪಿಸುವುದರ ವಿರುದ್ಧ ಸರ್ವಪಕ್ಷ ಚಳವಳಿ ಸಮಿತಿ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ದೊಂದಿ ಮೆರವಣಿಗೆಯಲ್ಲಿ ನೂರಾರು ಮಂದಿ ನಾಗರಿಕರು ಭಾಗವಹಿಸಿದರು. ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ಟೋಲ್ ಬೂತ್ ಸ್ಥಾಪಿಸುತ್ತಿರುವುದಾಗಿ ಚಳವಳಿ ನಿರತರು ಆರೋಪಿಸಿದರು. ಶಿಕ್ಷಣ, ಆಸ್ಪತ್ರೆ ಸಹಿತ ಎಲ್ಲಾ ಅಗತ್ಯಗಳಿಗೂ ಕಾಸರಗೋಡಿನ ಜನತೆ ಮಂಗಳೂರಿಗೆ ತೆರಳುತ್ತಿದ್ದಾರೆ. ಹಾಗೆ ತೆರಳಬೇಕಾದರೆ ಕುಂಬಳೆ ಹಾಗೂ ತಲಪಾಡಿಯಲ್ಲಿ ಟೋಲ್ ನೀಡಬೇಕೆಂದು ಹೇಳುವುದನ್ನು ಸವಾಲಾಗಿಯೇ ಕಾಣಬೇಕಾಗಿದೆಯೆಂದು ನಾಗರಿಕರು ತಿಳಿಸಿದ್ದಾರೆ. ಆದ್ದರಿಂದ ಕುಂಬಳೆಯಲ್ಲಿ ಟೋಲ್ ಸಂಗ್ರಹಿಸಲಿರುವ ಪ್ರಯತ್ನವನ್ನು ಉಪೇಕ್ಷಿಸಬೇಕೆಂದು ವಿವಿಧ ಪಕ್ಷಗಳ ನೇತಾರರು ಒತ್ತಾಯಿಸಿದ್ದಾರೆ.