ನಗರದಲ್ಲಿ ಬಸ್‌ಗಳು ಢಿಕ್ಕಿ ಹೊಡೆದು 25 ಮಂದಿಗೆ ಗಾಯ

ಕಾಸರಗೋಡು: ನಗರದ ಪೊಲೀಸ್ ಠಾಣೆಯ ಎದುರುಗಡೆ ಬ್ಯಾಂಕ್ ರಸ್ತೆಯಲ್ಲಿ ನಿನ್ನೆ ಸಂಜೆ ಖಾಸಗಿ ಟೂರಿಸ್ಟ್ ಬಸ್ ಮತ್ತು ವಿವಾಹ ತಂಡ ಸಂಚರಿಸುತ್ತಿದ್ದ ಬಸ್ ಪರಸ್ಪರ  ಢಿಕ್ಕಿ ಹೊಡೆದು ೨೫ ಮಂದಿ ಗಾಯಗೊಂಡ ಘಟನೆ ನಡೆದಿದೆ.

ಮಧೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಆಲಂಪಾಡಿಯಿಂದ ಮದುವೆ ತಂಡದವರನ್ನು ಹೇರಿಕೊಂಡು ನೆಲ್ಲಿಕುಂಜೆಗೆ ಹೋಗುತ್ತಿದ್ದ ಟೂರಿಸ್ಟ್ ಬಸ್ ಪರಸ್ಪರ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಖಾಸಗೀ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಕ್ರೈನ್ ಉಪಯೋಗಿಸಿ ಪೊಲೀಸರು ಮತ್ತು ಊರವರ ಸಹಾಯದಿಂದ ರಕ್ಷಾ ಕಾರ್ಯಾಚರಣೆ ನಡೆಸಿದರು.

ಈ ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ನಗರದ ಕೇಳುಗುಡ್ಡೆ ನಿವಾಸಿ ಕಮಲಾಕ್ಷ (50) ಗಂಭೀರ ಗಾಯ ಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಉಳಿದಂತೆ ಟೂರಿಸ್ಟ್ ಬಸ್ ಚಾಲಕ ವಿದ್ಯಾನಗರದ ಸಫೀರ್ (40), ಬಸ್  ಪ್ರಯಾಣಿಕರಾದ ಮನ್ನಿಪ್ಪಾಡಿಯ ಸ್ವಪ್ನ (45), ಆಲಂಪಾಡಿಯ ಮುಸ್ತಫಾ (40), ಪಟ್ಲದ ಅಬ್ಬಾಸ್ (66), ಆಲಂಪಾಡಿಯ ಅಬ್ದುಲ್ ರಹಿಮಾನ್ (50), ಮೀಪುಗುರಿಯ ಸುರೇಶ್ (49), ಉಳಿಯತ್ತಡ್ಕದವರಾದ ಸರಸ್ವತಿ (57) ಮತ್ತು ಅಸಿಫಾ (30) ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರ ಗಾಯಾಳುಗಳಾದ ದೀಪು (24), ಸುಹಾನ (14), ಗೋಪಾಲಕೃಷ್ಣನ್ (55) ಎಂಬವರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗೊಂಡ ಇತರರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಇವರನ್ನು ಬಿಡುಗಡೆಗೊಳಿಸಲಾಯಿತು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page