ಪೂಚಕ್ಕಾಡ್ ನಿವಾಸಿ, ಅನ್ಯರಾಜ್ಯ ಕಾರ್ಮಿಕನ ಹತ್ಯೆ ಯತ್ನ: ಮಡಕ್ಕರ ಹಾರ್ಬರ್ ಸಮೀಪದ ಮನೆಯಲ್ಲಿ ತಲೆಮರೆಸಿಕೊಂಡಿದ್ದ ತಂಡ ಸೆರೆ
ಕಾಸರಗೋಡು: ಪೂರ್ವದ್ವೇಷದ ಹೆಸರಲ್ಲಿ ಯುವಕರು ಮಾರಕಾಯುಧಗಳನ್ನು ಉಪಯೋಗಿಸಿ ಆಕ್ರಮಿಸಿ ಹತ್ಯೆಗೈಯ್ಯಲು ಯತ್ನಿಸಿದರೆಂಬ ಪ್ರಕರಣದಲ್ಲಿ ನಾಲ್ಕು ಮಂದಿ ಸೆರೆಯಾಗಿದ್ದಾರೆ. ಕಾಞಂಗಾಡ್ ಪರಿಸರದಲ್ಲಿರುವ ಬಾಡಿಗೆ ಕ್ವಾರ್ಟರ್ಸ್ಗಳಲ್ಲಿ ವಾಸ ಮಾಡುತ್ತಿರುವ ರಂಶೀದ್ ಅಲಿಯಾಸ್ ಕಿಚ್ಚು, ಮೊಹಮ್ಮದ್ ಶಫೀಕ್, ಮೇರ್ಶಾನ್, ಆಶಿಕ್ ಅಲಿಯಾಸ್ ಮೊಂಜತ್ತಿ ಆಶಿಕ್ ಎಂಬಿವರನ್ನು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸಿದೆ. ಮಡಕ್ಕರ ಹಾರ್ಬರ್ ಸಮೀಪದ ಒಂದು ಮನೆಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದಾರೆ ಎಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ತಲುಪಿದ ಪೊಲೀಸ್ ತಂಡ ಈ ಮನೆಯನ್ನು ಸುತ್ತುವರಿದು ಆರೋಪಿಗಳನ್ನು ಸೆರೆ ಹಿಡಿದಿದೆ. ಬಂಧಿತ ಆರೋಪಿಗಳ ವಿರುದ್ಧ ಈ ಮೊದಲು ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಪ್ರಿಲ್ ೨೬ರಂದು ಸಂಜೆ ೩ ಗಂಟೆಗೆ ಕಾಞಂಗಾಡ್ ನಗರದ ಬಾರ್ ಒಂದರ ಸಮೀಪ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು. ಪಳ್ಳಿಕೆರೆ ಪೂಚಕ್ಕಾಡ್ ನಿವಾಸಿ ಪಿ. ತಾಜುದ್ದೀನ್ (27), ಅನ್ಯರಾಜ್ಯ ಕಾರ್ಮಿಕನಾದ ಸೋಳಮನ್ ಖಾನ್ (20) ಎಂಬಿವರನ್ನು ಕೊಲೆಗೈಯ್ಯಲು ಯತ್ನಿಸಲಾಗಿತ್ತು. ಏಳು ಮಂದಿ ಅಡಕವಾದ ತಂಡ ಮರದ ಬಡಿಗೆ, ಪಂಚ್ ಸಹಿತ ಆಕ್ರಮಿಸಿರುವುದಾಗಿ ಕೇಸು ದಾಖಲಿಸಲಾಗಿತ್ತು. ತಾಜುದ್ದೀನ್ರಿಗೆ ಆಕ್ರಮಿಸುವುದನ್ನು ತಡೆಯಲು ಹೋದ ಮಧ್ಯೆ ಸೋಳಮನ್ಖಾನ್ಗೂ ಪಂಚ್ನಿಂದ ಆಕ್ರಮಿಸಲಾಗಿದೆ ಎಂದು ಕೇಸು ದಾಖಲಿಸಲಾಗಿದೆ.