ಪೊಲೀಸರನ್ನು ಕಂಡು ಸ್ಕೂಟರ್ನಲ್ಲಿ ಪರಾರಿಯಾದ ಯುವಕರ ಸೆರೆ: ಎಂಡಿಎಂಎ ಪತ್ತೆ
ಕಾಸರಗೋಡು: ಪೊಲೀಸರನ್ನು ಕಂಡೊಡನೆ ಸ್ಕೂಟರ್ನಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಬಳಿಕ ಅವರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.
ಕಣ್ಣೂರು ವೆಳ್ಳೂರು ಕಾರಮೇಲ್ ದಾರುಲ್ ಫನ ಎಂಬಲ್ಲ್ಲಿನ ಜಾಬಿರ್ ಅಬ್ದುಲ್ ಖಾದರ್ (34), ಕಾರಮೇಲ್ ನಂಗಾರತ್ತ್ ಹೌಸ್ನ ಮುಶ್ ಫಿಕ್ (30) ಎಂಬಿವರನ್ನು ಚಂದೇರ ಪೊಲೀಸ್ ಇನ್ಸ್ಪೆಕ್ಟರ್ ಪಿ. ಪ್ರಶಾಂತ್ ಹಾಗೂ ತಂಡ ಸೆರೆಹಿಡಿದಿದೆ. ನಿನ್ನೆ ರಾತ್ರಿ 8.30ರ ವೇಳೆ ವಡಕ್ಕೇ ತೃಕ್ಕರಿಪುರದಲ್ಲಿರುವ ಪೂಚೋಲ್ ವಿಶ್ವಕರ್ಮ ಸಮುದಾಯ ಸ್ಮಶಾನ ಬಳಿಯಿಂದ ಯುವಕರನ್ನು ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರನ್ನು ಕಂಡೊಡನೆ ಯುವಕರು ಸ್ಕೂಟರ್ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಸ್ಕೂಟರ್ಗೆ ತಡೆಯೊಡ್ಡಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಯುವಕನ ಪ್ಯಾಂಟ್ನ ಜೇಬಿನಿಂದ 2.50 ಗ್ರಾಂ ಎಂಡಿಎಂಎ ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.