ಬಂಜರು ಭೂಮಿಯನ್ನು ಹಸನಾಗಿಸಿ ಕೃಷಿಕನ ಸಾಧನೆ
ವರ್ಕಾಡಿ: ಪಂಚಾಯತ್ ವ್ಯಾಪ್ತಿಯ ದೈಗೋಳಿ ಸುಣ್ಣಂಗುಳಿ ಯಲ್ಲಿ ೨೫ ಎಕ್ರೆ ಸ್ಥಳದಲ್ಲಿ ಕೃಷಿ ಕೈಗೊಂಡು ರವಿಶಂಕರ್ ಭಟ್ ಸುಣ್ಣಂಗುಳಿ ಸಾಧನೆ ಮೆರೆದಿದ್ದಾರೆ. ಕಾಡು, ಕುರುಚಲು ಪೊದೆ, ಮುಳ್ಳುಗಳಿಂದ ಕೂಡಿದ ಕಲ್ಲು ಭೂಮಿಯನ್ನು ಹದಗೊಳಿಸಿ ಇವರು ಕೃಷಿ ಕೈಗೊಂಡಿದ್ದಾರೆ. ಹೆಚ್ಚಿನವರು ಕೃಷಿಯನ್ನು ಕೈಬಿಡುತ್ತಿರುವ ಸಂದರ್ಭದಲ್ಲಿ ಲಾಭೇಚ್ಛೆಯನ್ನು ಪರಿಗಣಿಸದೆ ಕೃಷಿಯಲ್ಲಿ ಆಸಕ್ತಿ ಮೂಡಿ ವಿವಿಧ ಕೃಷಿಗಳನ್ನು ಕೈಗೊಂಡು ಯುವಕರಿಗೆ ಮಾದರಿ ಯಾಗಿದ್ದಾರೆ. ಬಾಳೆ, ಅಡಿಕೆ, ಕರಿ ಮೆಣಸು, ಹಲಸು, ಡ್ರ್ಯಾಗನ್ಫ್ರೂಟ್, ರಂಬೂಟಾನ್ ಸಹಿತ ೩೦೦ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ಸು ಕಂಡಿದ್ದಾರೆ.
ರಬ್ಬರ್ ಕೃಷಿ ಕೂಡಾ ಒಂದಷ್ಟು ಸ್ಥಳದಲ್ಲಿ ಇವರು ಕೈಗೊಂಡಿದ್ದಾರೆ. ಕೃಷಿಗಾಗಿ ಐದು ಕೊಳವೆಬಾವಿಗಳನ್ನು ತೋಡಿದ್ದು, ಮಳೆಗಾಲದ ಸಂದರ್ಭದಲ್ಲಿ ನೀರು ಸಂಗ್ರಹಿಸಿಡಲು ೨೫ ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿಕೊಂಡಿದ್ದಾರೆ.
ಗಿಡಗಳಿಗೆ ಡ್ರಿಪ್ ಮೂಲಕ ನೀರು ಣಿಸುವಿಕೆ ಮತ್ತು ಗೊಬ್ಬರಗಳನ್ನು ಕೂಡಾ ಡ್ರಿಪ್ ಮೂಲಕ ಒದಗಿಸುತ್ತಿದ್ದಾರೆ. ಅಡಕೆಗೆ ಡ್ರಾನ್ ಮೂಲಕ ಕೀಟನಾಶಕ ಗಳನ್ನು ಸಿಂಪಡಿಸುತ್ತಾರೆ. ಕಳೆದ ಎರಡು, ಮೂರು ವರ್ಷಗಳಿಂದ ವಾತಾವರಣ ದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಇಳುವರಿಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ ಎಂದು ರವಿಶಂಕರ್ ಭಟ್ ತಿಳಿಸಿದ್ದಾರೆ.
ದೇಶಿ, ವಿದೇಶಿ ತಳಿಯ ವಿವಿಧ ಜಾತಿಯ ಹಣ್ಣಿನ ತಳಿಗಳು, ಹಲಸು, ಮಾವು, ತೆಂಗು ಮೊದಲಾದವುಗಳ ಕೃಷಿ ಕೈಗೊಂಡು ಈ ಬರಡು ಭೂಮಿಯನ್ನು ಇವರು ಹಸನುಗೊಳಿಸಿದ್ದಾರೆ. ವಿವಿಧ ಪೇರಳೆ, ಚಿಕ್ಕು, ಮಾವು, ಕಾಂಬೋಡಿಯಾ ಪಪ್ಪಾಯ, ಜಂಬು ನೇರಳೆ, ಥಾಲಾಂಡ್ ಗಿಡಗಳು ಸಹಿತ ವಿವಿಧ ರೀತಿಯ ಹಣ್ಣಿನ ಗಿಡಗಳು ಇವರ ಕೃಷಿ ಸ್ಥಳದಲ್ಲಿ ಕಂಗೊಳಿಸುತ್ತಿವೆ.
ತನ್ನ ೬೫ನೇ ವಯಸ್ಸಿನಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ವಾಣಿಜ್ಯ ಪದವೀಧರನಾಗಿ ದ್ದಾರೆ. ಕೃಷಿಯಲ್ಲಿನ ಆಸಕ್ತಿಯಿಂದ ದೈಗೋಳಿ ಬೋರ್ಕಳ- ಮೀಯ ಪದವು ಮಧ್ಯೆ ಅರೇಕಾ ಹೈಟ್ಸ್ ಸ್ಥಾಪಿಸಿ ಕೃಷಿಕರಿಗೆ ಮಾದರಿಯಾಗಿ ಕಂಡು ಬರುತ್ತಾರೆ. ನಾನು ಕೈಗೊಂಡಿರುವ ಕೃಷಿ ಲಾಭಕ್ಕಾಗಿ ಅಲ್ಲ, ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಿ ವಾಣಿಜ್ಯ ಬೆಳೆಯ ಮೂಲಕ ಇತರರಿಗೆ ಪ್ರೇರಣೆಯಾಗ ಬೇಕೆಂದುವುದು ನನ್ನ ಆಶಯ. ಸಮಯಕ್ಕೆ ಸರಿಯಾಗಿ ಶ್ರಮಕೈಗೊಂಡಿರುವುದರಿಂದ ಉತ್ತಮ ಫಲವನ್ನು ಇಲ್ಲಿಂದ ಪಡೆಯುತ್ತಿದ್ದೇನೆ ಎಂದು ರವಿಶಂಕರ್ ಭಟ್ ಸುಣ್ಣಂಗುಳಿ ನುಡಿಯುತ್ತಾರೆ.