ಭಾರೀ ಪ್ರಮಾಣದ ತಂಬಾಕು ಉತ್ಪನ್ನ ವಶ; ತಂದೆ, ಮಗ ಸಹಿತ ಮೂವರ ಸೆರೆ


ಕಾಸರಗೋಡು: ಕಾಸರಗೋಡು ಹಾಗೂ ಕಾಲಿಕ್ಕಡವಿನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಕೂಡ್ಲು ಕಾಳ್ಯಂಗಾಡಿನ ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ 7810 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಈ ಮಾಲುಗಳನ್ನು 570 ಚೀಲಗಳಲ್ಲಾಗಿ ತುಂಬಿಸಿಡಲಾಗಿತ್ತು. ಇದಕ್ಕೆ ಸಂಬAಧಿಸಿ ಆ ಮನೆ ಮಾಲಕ ಕಾಳ್ಯಂಗಾಡ್ ಫೌಸಿಯಾ ಮಂಜಿಲ್ ಇರ್ಫಾನ್ ಅಬ್ದುಲ್ ಖಾದರ್ (33) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ಆರೋಪಿ ಮತ್ತು ಆತನ ಕುಟುಂಬದವರು ವಾಸಿಸುತ್ತಿರುವ ಮನೆಯಾಗಿದೆ. ಅಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಬಚ್ಚಿಟ್ಟಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಅಲ್ಲಿಗೆ ದಾಳಿ ನಡೆಸಿದಾಗ ಮಾಲು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಪ್ರದೀಪ್ ಕುಮಾರ್ ಎಂ.ಎ.ಯವರ ನೇತೃತ್ವದ ಪೊಲೀಸರ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ.
ಕಾಲಿಕ್ಕಡವಿನಲ್ಲಿ ಪೊಲೀಸರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 100 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಕಾಲಿಕ್ಕಡವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ 1.30ರ ವೇಳೆ ಚಂದೇರ ಎಸ್.ಐ ಸುರೇಶ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಪಿಕಪ್ ವ್ಯಾನ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನ ಪತ್ತೆಯಾಗಿದೆ.
ವಾಹನದಲ್ಲಿದ್ದ ಮಧೂರು ನೇಶನಲ್ ನಗರ ಜೈಮಾತಾ ಶಾಲೆ ಸಮೀಪದ ಬಿಸ್ಮಿಲ್ಲ ಹೌಸ್ನ ಎ.ವಿ. ಶಮೀರ್ (40), ಈತನ ತಂದೆ ಯೂಸಫ್ (68) ಎಂಬಿವರನ್ನು ಬಂಧಿಸಲಾಗಿದೆ.
ಕಾಸರಗೋಡಿಗೆ ಲಾರಿಗಳಲ್ಲಿ ತಲುಪಿಸುವ ತಂಬಾಕು ಉತ್ಪನ್ನಗಳನ್ನು ಆರ್ಡರ್ ಅನುಸಾರ ಇವರು ಪಿಕಪ್ನಲ್ಲಿ ಸಾಗಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿವಿಲ್ ಪೊಲೀಸ್ ಆಫೀಸರ್ ಹರೀಶ್, ಹೋಂಗಾರ್ಡ್ ರಾಜನ್ ಎಂಬಿವರೂ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page