ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕಗ್ಗೊಲೆ: ನಿಷೇಧಾಜ್ಞೆ ಜ್ಯಾರಿ; ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ
ಮಂಜೇಶ್ವರ: ಮಂಗಳೂರು ಬಜಪೆ ಕಿನ್ನಿಪದವಿನ ಬಜರಂಗದಳ ಕಾರ್ಯ ಕರ್ತ ಸುಹಾಸ್ ಶೆಟ್ಟಿ (36)ರನ್ನು ನಿನ್ನೆ ರಾತ್ರಿ 8.30ರ ಸುಮಾರಿಗೆ ಮಂಗಳೂರು ಹೊರ ವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಿನ್ನಿಪದವಿನಲ್ಲಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ವಾಗಿ ಕೊಲೆ ನಡೆಸಿದುದನ್ನು ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇಂದು ನೀಡಿರುವ ಬಂದ್ಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಸ್ತಬ್ದಗೊಳಿಸಿದೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿ.ಎನ್.ಎಸ್. ಕಲಂ ೧೬೩ರ ಅಡಿ ಇಂದು ಮುಂಜಾನೆ ೬ ಗಂಟೆಯಿಂದ ಮೇ ೬ರ ಮುಂಜಾನೆ ೬ ಗಂಟೆ ತನಕ ನಿಷೇಧಾಜ್ಞೆ ಜ್ಯಾರಿಗೊ ಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲೂ ಬೀರತೊಡಗಿದೆ. ಇದರಿಂದಾಗಿ ಮಂಜೇಶ್ವರ, ಆದೂರು ಮತ್ತು ಬದಿಯಡ್ಕ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಕೇರಳ ಕರ್ನಾಟಕದ ಗಡಿ ಪ್ರದೇಶದಲ್ಲಿ ಕೇರಳ ಪೊಲೀಸರು ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ. ಬಂದ್ನ ಹಿನ್ನೆಲೆಯಲ್ಲಿ ಕಾಸರಗೋಡು- ಮಂಗಳೂರು, ಕಾಸರಗೋಡು- ಸುಳ್ಯ- ಪುತ್ತೂರು ಎಂಬೆಡೆಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ ರಾಜ್ಯ ಸರಕಾರಿ ಬಸ್ಗಳ ಸೇವೆಗಳು ಇಂದು ಮೊಟಕುಗೊಂಡಿವೆ. ಕಾಸರಗೋಡಿನಿಂದ ಮಂಗಳೂರಿಗೆ ಹೋಗುವ ಕೇರಳ ಕೆಎಸ್ಆರ್ಟಿಸಿ ಬಸ್ಗಳು ತಲಪ್ಪಾಡಿ ಗಡಿ ತನಕ ಸಾಗಿ ಅಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಹೇರಿ ಪುನಃ ಕಾಸರಗೋಡಿಗೆ ಮರಳುತ್ತದೆ. ಕಾಸರಗೋಡಿನಿಂದ ತಲಪ್ಪಾಡಿ ತನಕದ ರೂಟ್ನಲ್ಲಿ ಖಾಸಗಿ ಬಸ್ಗಳು ಎಂದಿನಂತೆ ಇಂದು ಸೇವೆ ನಡೆಸುತ್ತಿವೆ.
ಕಾಸರಗೋಡಿನಿಂದ ಮಂಗಳೂರಿಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ತಲಪಾಡಿ ಗಡಿಯಲ್ಲಿ ಸಾಲುಸಾಲಾಗಿ ನಿಂತಿರುವ ದೃಶ್ಯಗಳು ಇಂದು ಬೆಳಿಗ್ಗೆಯಿಂದ ಗೋಚರಿಸತೊಡಗಿದೆ. ಇನ್ನೊಂಡೆ ಕರ್ನಾಟಕ ಪ್ರದೇಶಕ್ಕೆ ಸೇರಿದ ಆಟೋರಿಕ್ಷಾ ಚಾಲಕರೂ ಇಂದು ರಿಕ್ಷಾ ಸೇವೆ ಮೊಟಕುಗೊಳಿಸಿ ದ್ದಾರೆ. ಇಂತಹ ಬೆಳವಣಿಗೆ ಕಾಸರಗೋಡಿನಿಂದ ಮಂಗಳೂರು ಮತ್ತು ಅಲ್ಲಿಂದ ಕಾಸರಗೋಡಿಗೆ ಬರುವ ಪ್ರಯಾಣಿಕರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.