ಮರ್ತ್ಯ ಮಸೀದಿ ಕಾಣಿಕೆ ಡಬ್ಬಿ ಮುರಿದು ಹಣ ಕಳವು: ಸಿಸಿ ಟಿವಿಯಲ್ಲಿ ಸೆರೆ
ಪೆರ್ಲ: ಮರ್ತ್ಯ ಜುಮಾ ಮಸೀದಿಯ ಕಾಣಿಕೆ ಡಬ್ಬಿಯಿಂದ ಹಣ ಕಳವುಗೈಯ್ಯಲಾಗಿದೆ. ಈ ಬಗ್ಗೆ ಮಸೀದಿ ಸಮಿತಿ ಕಾರ್ಯದರ್ಶಿ ಪೆರ್ಲ ಅಜಿಲಡ್ಕ ನಿವಾಸಿ ಶಾಹುಲ್ ಹಮೀದ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಾಣಿಕೆಡಬ್ಬಿಯನ್ನು ಮುರಿದು ಸುಮಾರು 10,000 ರೂ. ಕಳ್ಳ ಕದ್ದೊಯ್ದಿರುವುದಾಗಿ ಶಂಕಿಸಲಾಗಿದ್ದು, ಕಾಣಿಕೆ ಡಬ್ಬಿ ಮುರಿಯುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲು ಗೊಂಡಿದೆ. ಬಳಿಕ ಬೈಕ್ ಹತ್ತಿ ಕಳ್ಳ ಹಿಂತಿರುಗುತ್ತಿರುವುದು ವೀಡಿಯೋ ದಲ್ಲಿ ಸೆರೆಯಾಗಿದೆ. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಯನಡ್ಕ ಕುದ್ದುಪದವುನಲ್ಲೂ ಮಸೀದಿಯ ಕಾಣಿಕೆ ಡಬ್ಬಿ ಒಡೆದು ಕಳವು ನಡೆಸಲಾಗಿತ್ತು. ಪೆರ್ಲ ಇಡಿಯಡ್ಕದ ಮನೆಯ ಹಿಂಬಾಗಿಲು ಮುರಿದು ೮ ಪವನ್ ಚಿನ್ನಾಭರಣ, ನಗದು ಕಳವು ನಡೆಸಿದ ಘಟನೆಯೂ ಇತ್ತೀಚೆಗೆ ನಡೆದಿತ್ತು.