ಯುಡಿಎಫ್ ಶಾಸಕರು ತಪ್ಪು ಭಾವನೆ ಮೂಡಿಸುತ್ತಿದ್ದಾರೆ- ಎಡರಂಗ
ಕಾಸರಗೋಡು: ಎಡರಂಗದ ಆಡಳಿತ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಲಾಗುತ್ತಿಲ್ಲವೆಂಬ ಯುಡಿಎಫ್ ಶಾಸಕರ ನಿಲುವಿನಲ್ಲಿ ಸತ್ಯಾಂಶವಿಲ್ಲವೆಂದು ಎಡರಂಗ ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ಹೇಳಿದ್ದಾರೆ. ಎಡರಂಗ ಸರಕಾರ ಜ್ಯಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳನ್ನು ಕಳಪೆ ರೀತಿಯಲ್ಲಿ ನೋಡುವುದು ಪ್ರಜಾಪ್ರಭುತ್ವ ರೀತಿಗೆ ಹೊಂದಿಕೊಳ್ಳುವಂತದ್ದಲ್ಲ.
ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಪೆರಿಯದಲ್ಲಿ ಏರ್ಸ್ಟ್ರಿಪ್ ಇತ್ಯಾದಿ ಸಮಸ್ಯೆಗಳು ಪರಿಹರಿಸಬೇಕಾದ ವಿಷಯಗಳಾಗಿವೆ. ಅದನ್ನು ಮುಂದಿರಿಸಿಕೊಂಡು ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಅಭಿವೃದ್ಧಿ ಯೋಜನೆಗಳನ್ನು ಅರಿಯದಂತೆ ಯುಡಿಎಫ್ ಶಾಸಕರು ನಟಿಸುತ್ತಿರುವ ಯತ್ನಗಳನ್ನು ಜನರು ಅರಿತುಕೊಳ್ಳಲಿದ್ದಾರೆ.
ಎಡರಂಗ ಸರಕಾರ ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಿಫ್ಬಿ ಮೂಲಕ ರಸ್ತೆಗಳು, ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ ಕೋಟಿಗಟ್ಟಲೆ ರೂ. ವ್ಯಯಿಸಿದೆ. ಇನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಂಜೂರು ಮಾಡಲಾದ ಮೊತ್ತದ ಹೊರತಾಗಿ ಜಿಲ್ಲೆಯಲ್ಲಿ 16000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೂ ಆಡಳಿತಾನುಮತಿ ನೀಡಲಾಗಿದೆ.
ಕಿಫ್ಬಿ ನಿಧಿ ಬಳಸಿ ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಿಗೆ ಜ್ಯಾರಿಗೊಳಿಸಲಾದ ಯೋಜನೆಗಳ ಕುರಿತಾದ ಮಾಹಿತಿಗಳನ್ನು ಬಹಿರಂಗಪಡಿಸಲು ಯುಡಿಎಫ್ ಶಾಸಕರು ತಯಾರಾಗಬೇಕು.
ಮಂಜೇಶ್ವರ ಕ್ಯಾಂಪಸ್ನಲ್ಲಿ ಎಲ್ಎಲ್ಬಿ ಮತ್ತು ಎಲ್ಎಲ್ಎಂ ಕೋರ್ಸ್ಗಳನ್ನು ಆರಂಭಿಸಿರುವುದು ಎಡರಂಗ ಸರಕಾರವೇ ಆಗಿದೆ. ಕಾಸರಗೋಡು ನಗರದಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಆರಂಭಿಸಿದ್ದು ಎಡರಂಗ ಸರಕಾರದ ಆಡಳಿತದ ಕಾಲದಲ್ಲೇ ಆಗಿದೆ ಎಂಬುವುದನ್ನು ಯುಡಿಎಫ್ ಶಾಸಕರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕೆಂದು ಎಡರಂಗ ಸಂಚಾಲಕರು ಹೇಳಿದ್ದಾರೆ.