ವಾಹನ ಪಾರ್ಕಿಂಗ್ ವಿಷಯದಲ್ಲಿ ವಾಗ್ವಾದ: ಕೊಲೆಯತ್ನ ಪ್ರಕರಣ; ನಾಲ್ವರು ಆರೋಪಿಗಳಿಗೆ ಸಜೆ, ಜುಲ್ಮಾನೆ
ಕಾಸರಗೋಡು: ವಾಹನ ಪಾರ್ಕಿಂಗ್ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ ಚಾಕು, ಕಬ್ಬಿಣದ ಸರಳು ಇತ್ಯಾದಿಗಳಿಂದ ಆರು ಮಂದಿಯ ಮೇಲೆ ದಾಳಿ ನಡೆಸಿ ಅವರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮೂರು ವರ್ಷ ೯ತಿಂಗಳ ಸಜೆ ಹಾಗೂ ತಲಾ 20,000 ರೂ. ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮುಟ್ಟತ್ತೋಡಿ ಆಲಂಪಾಡಿ ನಿವಾಸಿಗಳಾದ ಅಬ್ದುಲ್ ಹಕೀಂ (38), ಅಹಮ್ಮದ್ ಕಬೀರ್ (37), ಅಹಮ್ಮದ್ ಗಸಾಲಿ (34) ಮತ್ತು ಮೂಸಾ ಸುನೈಫ್ ಅಲಿಯಾಸ್ ಉಕ್ಕುಞ್ಞಿ (೩೫) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. 2018 ಎಪ್ರಿಲ್ 1ರಂದು ಆಲಂಪಾಡಿಯಲ್ಲಿ ಆಲಂಪಾಡಿ ನಿವಾಸಿಗಳಾದ ಹೈದರಲಿ, ಮುಹಮ್ಮದ್ ಮುಸ್ತಫಾ, ಮುದಾಸಿರ್, ಉಮ್ಮರ್ ಫಾರೂಕ್, ಸಮೀರ್ ಮತ್ತು ಅಬ್ದುಲ್ಲ ಎಂಬವ ರನ್ನು ಇರಿದು ಗಾಯಗೊಳಿಸಿದ ದೂರಿನಂತೆ ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಈ ಕೊಲೆ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿದಾರರು ನಿಷ್ಠೆ ಬದಲಿಸಿ ಹೇಳಿಕೆ ನೀಡಿದ್ದರೂ ಸಾಂದರ್ಭಿಕ ಪುರಾವೆಗಳ ಹಾಗೂ ಪೊಲೀಸರು ಹಾಜರುಪಡಿಸಿದ ದಾಖಲುಪತ್ರಗಳ ಆಧಾರದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿದೆ.
ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಕೆ.ಪಿ. ವಿನೋದ್ ಕುಮಾರ್ ಹಾಗೂ ಇ. ಅನೂಬ್ ಕುಮಾರ್ ಈ ಪ್ರಕರಣದ ತನಿಖೆ ನಡೆಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.
ಈ ಪ್ರಕರಣದಲ್ಲಿ 7 ಮಂದಿ ಆರೋಪಿಗಳಿದ್ದು, ಅದರಲ್ಲಿ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ.