ವಿಳಿಂಞಂ ಬಂದರು ಪ್ರಧಾನಮಂತ್ರಿ ಲೋಕಾರ್ಪಣೆ
ತಿರುವನಂತಪುರ: ಕೇರಳದ ಹೆಮ್ಮೆಯ ಯೋಜನೆಯಾದ ವಿಳಿಂಞಂ ಬಂದರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೈದರು. ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿಯವರು ನಿನ್ನೆಯೇ ತಿರುವನಂತಪುರಕ್ಕೆ ಆಗಮಿಸಿದರು. ಇಂದು ಬೆಳಿಗ್ಗೆ ರಾಜ್ ಭವನದಿಂದ ಪಾಂಙೋಡ್ ಮಿಲಿಟರಿ ಕ್ಯಾಂಪ್ಗೆ ತಲುಪಿದ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಿಳಿಂಞಕ್ಕೆ ತೆರಳಿದರು. ಹಲವು ವರ್ಷಗಳಿಂದ ಜನತೆ ಅತೀ ಕಾತರದಿಂದ ಕಾಯುತ್ತಿರುವ ಈ ಬೃಹತ್ ಯೋಜನೆಯ ಉದ್ಘಾಟನೆಯನ್ನು ವೀಕ್ಷಿಸಲು ಸಾವಿರಾರು ಮಂದಿ ವಿಳಿಂಞಕ್ಕೆ ತಲುಪಿದ್ದಾರೆ. ಮುಖ್ಯಮಂತ್ರಿ, ಸಚಿವರು, ವಿವಿಧ ರಾಜಕೀಯ, ಸಾಂಸ್ಕೃತಿಕ ರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ನಿನ್ನೆ ರಾತ್ರಿ ೭.೪೫ರ ವೇಳೆ ತಿರುವನಂತಪುರಕ್ಕೆ ತಲುಪಿದ ಪ್ರಧಾನಮಂತ್ರಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದ ಶಶಿತರೂರ್, ಬಿಜೆಪಿ ರಾಜ್ಯ ನೇತಾರರು ಸೇರಿ ಹಾರ್ದಿಕವಾಗಿ ಸ್ವಾಗತಿಸಿದರು. ಇಂದು ವಿಳಿಂಞದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಮಂತ್ರಿ ದೆಹಲಿಗೆ ಮರಳುವರು.