ವಿವಿಧೆಡೆ ಅಬಕಾರಿ ದಾಳಿ: ಅಮಲು ಪದಾರ್ಥ, ಮದ್ಯ ವಶ; ಮೂವರ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಮಲು ಪದಾರ್ಥ ಮತ್ತು ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ಉದುಮ ಪಡಿಞಾರ್ನಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಪ್ರಶೋಬ್ ಕೆ.ಎಸ್.ರ ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಅಮಲು ಪದಾರ್ಥವಾದ 17.23 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉದುಮ ಪಡಿಞಾರ್ ಬೇವೂರಿನ ಪಿ.ಎಂ. ಮಂಜಿಲ್ ನಿವಾಸಿ ಮೊಹಮ್ಮದ್ ರಾಸಿಕ್ ಪಿ.ಎಂ. (29) ಎಂಬಾತನನ್ನು ಬಂಧಿಸಿ ಎನ್ಡಿಪಿಎಸ್ ಕಾನೂನು ಪ್ರಕಾರ ಕೇಸು ದಾಖಲಿ ಸಿಕೊಳ್ಳಲಾಗಿದೆ. ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್ ಜನಾರ್ದನನ್ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಈ ಅಬಕಾರಿ ಕಾರ್ಯಾಚರಣೆ ನಡೆದಿದೆ. ಈ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್)ಗಳಾದ ಸಿಕೆವಿ ಸುರೇಶ್, ಪ್ರಮೋದ್ ಕುಮಾರ್ ವಿ, ಗ್ರೇಡ್ ಪ್ರಿವೆಂಟಿವ್ ಆಫೀಸರ್ಗಳಾದ ನೌಶಾದ್ ಕೆ, ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಥುಲ್ ಟಿ.ವಿ, ಸೋನು ಸೆಬಾಸ್ಟಿಯನ್, ರಾಜೇಶ್ ಪಿ, ಶಿಜಿತ್ ವಿ.ವಿ, ರೀನಾ ವಿ, ಅಶ್ವತಿ ವಿ. ಹಾಗೂ ಚಾಲಕ ಸಜೀಶ್ ಒಳಗೊಂಡಿದ್ದರು.
ಇದೇ ರೀತಿ ಕುಂಬಳೆಗೆ ಸಮೀಪದ ಬಂಬ್ರಾಣದಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ 17.28 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಬಂಬ್ರಾಣ ಬೀರಂಟಿಕೆರೆಯ ತಿಮ್ಮಪ್ಪ ಬಿ. (52) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ರೇಂಜ್ ಎಕ್ಸೈಸ್ ಕಚೇರಿಯ ಎಕ್ಸೈಸ್ ಇನ್ಸ್ಪೆಕ್ಟರ್ ಮ್ಯಾಥ್ಯು ಕೆ.ಡಿ.ಯವರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ ಪೀತಾಂಭರನ್ ಕೆ., ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ, ಚಾಲಕ ಪ್ರವೀಣ್ ಕುಮಾರ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಉಪ್ಪಳಕ್ಕೆ ಸಮೀಪದ ಕುಬಣೂ ರಿನಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 5.04 ಲೀಟರ್ ಕರ್ನಾಟಕ ಮದ್ಯವನ್ನು ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಪೀತಾಂಬರನ್ ಕೆ.ಯು.ರ ನೇತೃತ್ವದ ತಂಡ ವಶಪಡಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ. ಮತ್ತು ಚಾಲಕ ಪ್ರವೀಣ್ ಕುಮಾರ್ ಒಳಗೊಂಡಿದ್ದರು.
ಹೊಸದುರ್ಗದ ಕಡಿಕ್ಕಾಲ್ನಲ್ಲಿ ಗಾಂಜಾ ಸಿಗರೇಟ್ ಸೇವಿಸಿದ ಆರೋಪದಂತೆ ಕಡಿಕ್ಕಾಲ್ ನಿವಾಸಿ ಶ್ರೀಹರಿ ಎಂ.ಆರ್. ಎಂಬಾತನ ವಿರುದ್ಧ ಅಬಕಾರಿ ತಂಡ ಕೇಸು ದಾಖಲಿಸಿಕೊಂಡಿದೆ. ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ರ ನೇತೃತ್ವದ ತಂಡ ಈತನನ್ನು ಬಂಧಿಸಿದೆ. ಈ ತಂಡದಲ್ಲಿ ಅಬಕಾರಿ ಸಿಬ್ಬಂದಿಗಳಾದ ನಿಶಾದ್ ಪಿ, ಅರುಣ್ ಕೆ.ಆರ್, ಶಿಜು ಕೆ, ಮತ್ತು ಚಾಲಕ ದಿಲ್ಜಿತ್ ಪಿ.ವಿ. ಎಂಬವರು ಒಳಗೊಂಡಿದ್ದರು.