ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ : ಐದು ಮಂದಿ ಸಾವು; ಹಲವರಿಗೆ ಗಾಯ
ಕಲ್ಲಿಕೋಟೆ: ಕಲ್ಲಿಕೋಟೆ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. ಇದರಲ್ಲಿ ಐದು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ನಡೆದಿದೆ. ಅಸಮರ್ಪಕ ಯುಪಿಎಸ್ ವ್ಯವಸ್ಥೆಯಿಂದ ಶೋರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಎದ್ದು ಇತರೆಡೆಗಳಿಗೆ ಪಸರಿಸಿ ರಬಹುದೆಂದು ಶಂಕಿಸಲಾಗಿದೆ. ಈ ಅನಾಹುತದಿಂದ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಸಿಬ್ಬಂದಿಗಳನ್ನು ಭೀತಿಗೊಳಪಡಿಸಿದೆ. ಹೊಗೆ ವಾರ್ಡ್ನಾದ್ಯಂತ ಹರಡಿತ್ತು. ಇದರಿಂದ ಹಲವು ಮಂದಿ ಉಸಿರಾಟ ತೊಂದರೆ ಎದುರಿಸಬೇಕಾಗಿಬಂತು.
ಬೆಂಕಿ ಕಾಣಿಸಿಕೊಂಡಾಕ್ಷಣ ಅಗ್ನಿ ಶಾಮಕದಳ, ಪೊಲೀಸರು, ವಿಪತ್ತು ನಿರ್ವಹಣಾ ಪಡೆಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಲ್ಲಿ 200ರಷ್ಟು ಮಂದಿಯನ್ನು ಅಲ್ಲೇ ಪಕ್ಕದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾ ಯಿತು. ಈ ದುರಂತದಲ್ಲಿ ಐದು ಮಂದಿಯ ಸಾವಿನ ಸ್ಪಷ್ಟ ಕಾರಣ ಇನ್ನೂ ಹೊರಬಂದಿಲ್ಲ. ಸಾವಿನ ನಿಗೂಢತೆ ಇನ್ನೂ ಮುಂದುವರಿಯುತ್ತಿದೆ. ದಟ್ಟವಾದ ಹೊಗೆಯಿಂದ ಉಸಿರಾಟ ತೊಂದರೆಗೊಳಗಾಗಿ ಇವರು ಸಾವನ್ನಪ್ಪಿದ್ದರೇ ಎಂಬುವುದು ಇನ್ನಷ್ಟೇ ಸ್ಪಷ್ಟಗೊಳ್ಳಲಿದೆ. ಸ್ಟೇಟ್ ಹಿಲ್ ನಿವಾಸಿ ಗೋಪಾಲನ್, ಕೊಯಿಲಾಂಡಿಯ ಗಂಗಾಧರನ್, ಪಶ್ಚಿಮ ಬಂಗಾಳದ ಗಂಗಾ, ವಯನಾಡಿನ ಸಾಹಿರಾ ಮತ್ತು ವಡಗರ ನಿವಾಸಿ ಸುರೇಂದ್ರನ್ ಎಂಬವರು ಈ ಅನಾಹುತದಿಂದ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ.
ಈ ದುರ್ಘಟನೆ ಬಗ್ಗೆ ಪೊಲೀಸರು ಮಾತ್ರವಲ್ಲ ಆರೋಗ್ಯ ಇಲಾಖೆಯೂ ಸಮಗ್ರ ತನಿಖೆ ಆರಂಭಿಸಿದೆ.