ಶೋಭಾ ಸುರೇಂದ್ರನ್ ಮನೆ ಮುಂದೆ ಸ್ಫೋಟಕ ವಸ್ತು ಎಸೆದ ಕಿಡಿಗೇಡಿಗಳು
ತೃಶೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ರ ಮನೆ ಮುಂದೆ ಕಿಡಿಗೇಡಿಗಳು ಸ್ಫೋಟಕ ವಸ್ತು ಸಿಡಿಸಿದ ಘಟನೆ ನಡೆದಿದೆ. ತೃಶೂರು ಅಯ್ಯಂತೋಳಿ ಎಂಬಲ್ಲಿರುವ ಮನೆಮುಂದೆ ನಿನ್ನೆ ರಾತ್ರಿ 10.40ರ ವೇಳೆ ಸ್ಫೋಟಕವಸ್ತು ಸಿಡಿದಿದೆ. ಬೈಕ್ನಲ್ಲಿ ತಲುಪಿದ ಕಿಡಿಗೇಡಿಗಳು ಸ್ಫೋಟಕವಸ್ತು ಎಸೆದು ಪರಾರಿಯಾಗಿರುವುದಾಗಿ ಸಂಶಯಿಸಲಾಗಿದೆ. ಬೈಕ್ನಲ್ಲಿ ನಾಲ್ಕು ಮಂದಿಯಿದ್ದುದಾಗಿ ಪೊಲೀಸರು ದೃಢೀಕರಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಪ್ರಾದೇಶಿಕ ಘಟಕ ಒತ್ತಾಯಿಸಿದೆ. ಶೋಭಾ ಸುರೇಂದ್ರನ್ ಮನೆಯಲ್ಲಿರುವ ಸಂದರ್ಭದಲ್ಲಿ ಸ್ಫೋಟ ನಡೆದಿದೆ. ಮನೆ ಮುಂಭಾಗದ ರಸ್ತೆಯಲ್ಲಿ ಸ್ಫೋಟ ನಡೆದ ಶಬ್ದ ಕೇಳಿಬಂದಿರುವುದಾಗಿ ಶೋಭಾ ಸುರೇಂದ್ರನ್ ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಬಿಜೆಪಿ ನೇತಾರರ ಮನೆಗಳಿಗೆ ಸಂರಕ್ಷಣೆ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.