ಸರಕಾರದ 4ನೇ ವಾರ್ಷಿಕಾಚರಣೆ ನಿಸ್ಸಹಾಯಕರಾದ ಒಂದು ವಿಭಾಗದ ಜನರ ಕಣ್ಣೀರಿನಲ್ಲಿ- ಎಂ.ಟಿ. ರಮೇಶ್
ಕಾಸರಗೋಡು: ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗಾ ರ್ಥಿಗಳು, ಆಶಾ ಕಾರ್ಯಕರ್ತೆಯರು ಸಹಿತ ನಿಸ್ಸಹಾಯಕರಾದ ಒಂದು ವಿಭಾಗದ ಜನರ ಕಣ್ಣೀರಿನಲ್ಲಿ ಎಡರಂಗ ಸರಕಾರ ನಾಲ್ಕನೇ ವಾರ್ಷಿಕವನ್ನು ಆಚರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನುಡಿದರು. ವಿವಿಧ ಮುಷ್ಕರಗಳ ಬಗ್ಗೆ ನಿಷೇಧಾತ್ಮಕ ನಿಲುವನ್ನು ಕಮ್ಯೂನಿಸ್ಟ್ ಆಡಳಿತ ಕೂಟ ಹೊಂದುತ್ತಿದೆ ಎಂದು ಅವರು ಆರೋಪಿಸಿದರು. ಕೇರಳದಲ್ಲಿ ನಡೆಯುತ್ತಿರುವ ವಿವಿಧ ಮುಷ್ಕರಗಳ ವಿರುದ್ಧ ಎಡರಂಗ ತಳೆಯುತ್ತಿರುವ ನಿಲುವು ಅವರ ಕಮ್ಯೂನಿಸ್ಟ್ ಸ್ವಭಾವವನನ್ನು ಕಳೆದುಕೊಂಡಿರುವುದಕ್ಕೆ ಪುರಾವೆಯಾಗಿದೆ ಎಂದು ಅವರು ನುಡಿದರು. ರ್ಯಾಂಕ್ ಲಿಸ್ಟ್ ಕಾಲಾವಧಿ ಕೊನೆಗೊಳ್ಳುವಾಗ ಉದ್ಯೋಗಾರ್ಥಿ ಗಳನ್ನು ಸಮಾಧಾನಪಡಿ ಸುವುದಕ್ಕೆ ಬದಲಾಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನೋಡಲು ಆಗ್ರಹಿಸುತ್ತಿರುವುದು ಖಂಡನೀಯವಾಗಿದೆ ಎಂದು ಅವರು ನುಡಿದರು. ಆಶಾ ಕಾರ್ಯಕರ್ತೆಯರ ಮುಷ್ಕರ ಎರಡು ತಿಂಗಳು ಕಳೆದರೂ ಎಡರಂಗ ಸರಕಾರ ಮೌನ ವಹಿಸಿದೆ. ಯುವಜನರ ಸಮಸ್ಯೆಗಳಲ್ಲಿ ಮಧ್ಯ ಪ್ರವೇಶಿಸಲು ಹಿಂದೇಟು ಹಾಕುತ್ತಿರುವ ಡಿವೈಎಫ್ಐ ಮಾದಕ ಪದಾರ್ಥ ಮಾಫಿಯಾಗಳಿಗೆ ಬೆಂಬಲವಾಗಿ ನೆಲೆಗೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷರ ಕೇರಳ ಯಾತ್ರೆ ಹಾಗೂ ವಿಕಸಿತ್ ಕೇರಳ ಸಮಾವೇಶ ಇಂದಿನಿಂದ ಮೇ 10ರ ವರೆಗೆ ರಾಜ್ಯದ 30 ಸಂಘಟನಾ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಎಂ.ಟಿ. ರಮೇಶ್ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸಹಿತ ಹಲವರು ಜೊತೆಗಿದ್ದರು.