ಸ್ಥಳೀಯಾಡಳಿತ ಸಂಸ್ಥೆಗಳ ಅವಗಣನೆ ವಿರುದ್ಧಪ್ರತಿಭಟನಾ ಸಂಗಮ
ವರ್ಕಾಡಿ: ಸ್ಥಳೀಯಾಡಳಿತ ಸಂಸ್ಥೆಗಳನ್ನು ಅವಗಣಿಸುತ್ತಿರುವ ರಾಜ್ಯದ ಎಡರಂಗ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಎಲ್ಜಿಎಂಎಲ್ ನೀಡಿದ ಕರೆಯಂತೆ ಯುಡಿಎಫ್ ಜನಪ್ರತಿನಿಧಿಗಳು ಮತ್ತು ನಾಯಕರು ವರ್ಕಾಡಿ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ ಸಂಗಮ ನಡೆಸಿದರು. ಐದು ತಿಂಗಳುಗಳಿಂದ ಮೊಟಕುಗೊಂಡ ಪಿಂಚಣಿ ಶೀಘ್ರ ನೀಡಬೇಕು, ಕಟ್ಟಡ ತೆರಿಗೆ, ಪರ್ಮಿಟ್ ಶುಲ್ಕ ಹೆಚ್ಚಳ ಹಿಂತೆಗೆಯಬೇಕು, ಟ್ರಶರಿ ನಿಯಂತ್ರಣ ಹಿಂತೆಗೆಯಬೇಕು, ಪಂಚಾಯತ್ಗಳ ಅಧಿಕಾರ ಮೊಟಕುಗೊಳಿಸುವ ಯತ್ನ ಹಿಂಪಡೆಯಬೇಕು, ತಾತ್ಕಾಲಿಕ ನೇಮಕಾತಿ ಮರೆಯಲ್ಲಿ ಸ್ವಪಕ್ಷೀಯರಿಗೆ ಉದ್ಯೋಗ ನೀಡುವ ಕ್ರಮ ಕೊನೆಗೊಳಿಸಬೇಕು, ಕಾಮಗಾರಿಗಳ ನಿರ್ವಹಣೆಗೆ ಅಡ್ಡಿಯಾದ ತೊಡಕುಗಳನ್ನು ಪರಿಹರಿಸಬೇಕು, ಬಜೆಟ್ನಲ್ಲಿ ಮೀಸಲಿಟ್ಟ ಮೊತ್ತ ಶೀಘ್ರ ನೀಡಬೇಕು, ಲೈಫ್ ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟಿಸಲಾಯಿತು. ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಬಿ.ಎ, ಇಬ್ರಾಹಿಂ ಧರ್ಮನಗರ, ಸೀತಾ ಡಿ, ಉಮ್ಮರ್ ಬೋರ್ಕಳ, ನೇತಾರರಾದ ಮೊಹಮ್ಮದ್ ಮಜಾಲ್, ಮೊಹಮ್ಮದ್ ಪುತ್ತು ಸಹಿತ ಹಲವರು ಭಾಗವಹಿಸಿದರು.