ಸ್ವರ್ಗ-ತೂಂಬಡ್ಕ ರಸ್ತೆಯಲ್ಲಿ 1.3 ಕಿ.ಮೀ. ಶೋಚನೀಯ: ದುರಸ್ತಿಗೆ ನಾಗರಿಕರ ಬೇಡಿಕೆ

ಪೆರ್ಲ: ಸ್ವರ್ಗದಿಂದ ತೂಂಬಡ್ಕ ಮೂಲಕ ಆರ್ಲಪದವಿಗೆ ತೆರಳಿ ಸಂಪರ್ಕ ಕಲ್ಪಿಸುವ ಕೇರಳ ವ್ಯಾಪ್ತಿಯಲ್ಲಿರುವ 1.3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೊಳಗಾಗದೆ ಶೋಚನೀಯಾವಸ್ಥೆಯಲ್ಲಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವರ್ಗ-ತೂಂಬಡ್ಕ ರಸ್ತೆಯನ್ನು ಸುಮಾರು 40 ವರ್ಷಗಳ ಹಿಂದೆ ಸ್ಥಳೀಯರು ನಿರ್ಮಿಸಿದ್ದರು. ಅನಂತರ ಅದನ್ನು ಕರ್ನಾಟಕ ಗಡಿ ತನಕ ತಲುಪಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಬಂಟಾಜೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಈ ರಸ್ತೆ ಇದಾಗಿದ್ದು, ಕೇರಳ ಭಾಗದಲ್ಲಿರುವ ರಸ್ತೆಯಲ್ಲಿ ಇದೀಗ ಹೊಂಡಗಳು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಕಗ್ಗಲ್ಲು ಸಹಿತ ಅಪರಿಮಿತ ಬಾರ ಹೇರಿದ ಲಾರಿಗಳು ಸಂಚರಿಸಿರುವುದೇ ರಸ್ತೆ ಹಾನಿಗೀಡಾಗಲು ಕಾರಣವೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ನಾಗರಿಕರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಅದ್ಯಾವುದೂ ಪ್ರಯೋಜನವಾಗಲಿಲ್ಲ. ಇದೇ ಸ್ಥಿತಿ ಮುಂದುವರಿದರೆ ರಸ್ತೆಯ ಹೊಂಡ ಇನ್ನಷ್ಟು ಆಳವಾಗಲಿದ್ದು, ಜನಸಂಚಾರಕ್ಕೆ ಪೂರ್ಣ ಅಡಚಣೆ ಉಂಟಾಗಲಿದೆ ಎಂದು ನಾಗರಿಕರು ಆತಂಕವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page