ಹತ್ಯೆ ಯತ್ನ ಸಹಿತ ಹಲವು : ಪ್ರಕರಣಗಳ ಆರೋಪಿ ಬಂಧನ

ಉಪ್ಪಳ: ಹತ್ಯೆ ಯತ್ನ ಸಹಿತ ಹಲ ವಾರು ಪ್ರಕರಣಗಳಲ್ಲಿ ಆರೋಪಿಯಾಗಿ ಹಲವು ವರ್ಷಗಳಿಂದ  ತಲೆಮರೆಸಿಕೊಂ ಡಿದ್ದ  ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ, ಕೈಕಂಬ ಬಂಗ್ಲಾ ಕಂಪೌಂಡ್‌ನ ಆದಂಖಾನ್ (24) ಎಂಬಾತನನ್ನು ಪೊಲೀಸರು ಅತೀ ಸಾಹಸಿಕವಾಗಿ ಮನೆಗೆ ಸುತ್ತುವರಿದು ಸೆರೆ ಹಿಡಿದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಿ. ಶಿಲ್ಪಾ ಹಾಗೂ ಡಿವೈಎಸ್‌ಪಿ ಕೆ.ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಮಂಜೇಶ್ವರ ಇನ್ಸ್‌ಪೆಕ್ಟರ್ ಅನೂಬ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ರತೀಶ್ ಗೋಪಿ, ಸಿಪಿಒಗಳಾದ ವಿಜಯನ್, ಅನೀಶ್ ಕುಮಾರ್ ಕೆ.ಎಂ., ಸಂದೀಪ್ ಎಂ, ಭಕ್ತ ಶೈವನ್ ಸಿ.ಎಚ್. ಎಂಬಿವ ರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಮಂಜೇಶ್ವರದಲ್ಲಿ ನಡೆದ ಹತ್ಯಾಯತ್ನ ಪ್ರಕರಣಕ್ಕೆ ಸಂಬಂಧಿಸಿ 2020ರಲ್ಲಿ ಸೆರೆಗೀಡಾದ ಈತನನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ೨ನೇ ಮಹಡಿಯಿಂದ ಕಿಟಿಕಿ ಮೂಲಕ ಈತ ಜಿಗಿದು ಪರಾರಿಯಾಗಿದ್ದನು. ಅನಂತರ ಕರ್ನಾಟಕ, ಆಂಧ್ರಪ್ರದೇಶ ಎಂಬೆಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಈತ ಹತ್ಯೆಯತ್ನ, ಕಳವು, ಮಾದಕವಸ್ತು ಮಾರಾಟ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ ಕೈಕಂಬದ ಮನೆಗೆ ಈತ ತಲುಪಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಅಲ್ಲಿಗೆ ತಲುಪಿದ ತಂಡ ಮನೆಗೆ ಸುತ್ತುವರಿದು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

RELATED NEWS

You cannot copy contents of this page