ಹುಚ್ಚುನಾಯಿ ಕಚ್ಚಿ 3 ಬಾರಿ ಚುಚ್ಚುಮದ್ದು ತೆಗೆದ ಬಾಲಕಿ ಮೃತ್ಯು
ತಿರುವನಂತಪುರ: ಹುಚ್ಚುನಾಯಿ ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊಲ್ಲಂ ನಿವಾಸಿಯಾದ ೭ರ ಬಾಲಕಿ ಮೃತಪಟ್ಟಳು. ಕುನ್ನಿಕ್ಕೋಡ್ ಜಾಸ್ಮಿನ್ ಮಂಜಿಲ್ನ ನಿಯಾ ಫೈಸಲ್ ತಿರುವನಂತಪುರ ಎಸ್ಎಟಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟಿದ್ದಾಳೆ. ಕಳೆದ ತಿಂಗಳ ೮ರಂದು ಮನೆ ಪರಿಸರದಲ್ಲಿ ಬಾಲಕಿಗೆ ನಾಯಿ ಕಚ್ಚಿತ್ತು. ಆ ಬಳಿಕ ಮೂರು ಬಾರಿ ಪ್ರತಿರೋಧ ಚುಚ್ಚು ಮದ್ದು ನೀಡಲಾಗಿತ್ತು. ೨೯ರಂದು ಜ್ವರ ತಗಲಿದ ಹಿನ್ನೆಲೆಯಲ್ಲಿ ಹುಚ್ಚುನಾಯಿ ಕಚ್ಚಿರುವುದನ್ನು ಖಚಿತಪಡಿಸಲಾಗಿತ್ತು. ನರದ ಮೂಲಕ ವಿಷ ತಲೆಗೆ ತಲುಪಿರುವುದು ಪತ್ತೆಹಚ್ಚಲಾಗಿತ್ತು. ಕಳೆದ ಒಂದು ತಿಂಗಳ ಮಧ್ಯೆ ಹುಚ್ಚುನಾಯಿ ಕಚ್ಚಿ ರಾಜ್ಯದಲ್ಲಿ ಸಾವಿಗೀಡಾಗುವ ಮೂರನೇ ಪ್ರಕರಣ ಇದಾಗಿದೆ. ಪತ್ತನಂತಿಟ್ಟ ಪುಲ್ಲಾಡ್ ನಿವಾಸಿ ಭಾಗ್ಯಲಕ್ಷ್ಮಿ (೧೩), ಮಲಪ್ಪುರಂ ತೇನಿಪ್ಪಾಲಂ ನಿವಾಸಿ ಸಿಯಾ ಫಾರಿಸ್ (6) ಈ ಮೊದಲು ಹುಚ್ಚುನಾಯಿ ಕಚ್ಚಿ ಮೃತಪಟ್ಟಿದ್ದರು.
2021 ರ ಬಳಿಕ ಹುಚ್ಚುನಾಯಿ ರೋಗಕ್ಕಿರುವ ಚುಚ್ಚುಮದ್ದು ತೆಗೆದ ೨೨ ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಲೆಕ್ಕಗಳಿಂದ ತಿಳಿದು ಬರುತ್ತದೆ.