ಅಂಗಡಿಗೆ ನುಗ್ಗಿದ ಕಳ್ಳ ಕುತ್ತಿಗೆಯಿಂದ  ಚಿನ್ನದ ಸರ ಕಸಿದು ಪರಾರಿ

ಕಾಸರಗೋಡು: ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದ ಕಳ್ಳ ಸ್ಟೇಶನರಿ ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ  ಅಂಗಡಿ ಮಾಲಕಿಯ ಕುತ್ತಿಯಿಂದ ಎರಡು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಪೊಯಿನಾಚಿ ಬಳಿ ನಿನ್ನೆ ನಡೆದಿದೆ.

ಪೊಯಿನಾಚಿ ನೋರ್ತ್‌ನ ಮೆಚ್ಚಿಲಾಗತ್ತ್ ಆಗ್ರೋ ಗಾರ್ಡನ್ ಸಮೀಪ ಶ್ರೀ ಶಾಸ್ತಾ ಸ್ಟೇಶನರಿ ಅಂಗಡಿ ಮತ್ತು ಹೋಟೆಲ್ ನಡೆಸುತ್ತಿರುವ  ಆರ್. ನಿಷಾ (೪೪) ಎಂಬವರ ಕುತ್ತಿಗೆಯಿಂದ ಕಳ್ಳ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ವೇಳೆ ಘಟನೆ ನಡೆದಿದೆ.  ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸಿ ಖರೀದಿ ಸೋಗಿನಲ್ಲಿ ಅಂಗಡಿಯೊಳಗೆ ನುಗ್ಗಿದ ಕಳ್ಳ ನಿಷಾ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಮತ್ತು ಇನ್ನೊಂದು ಸರ ಕಸಿದು ಪರಾರಿಯಾಗಿದ್ದಾನೆ, ಅದರಲ್ಲಿ ಒಂದು ಸರದ ತುಂಡು ಅಲ್ಲೇ ಬಿದ್ದಿದೆ.  ಆ ವೇಳೆ ಅಂಗಡಿ ಮಾಲಕಿ ಬೊಬ್ಬೆ ಹಾಕಿದಾಗ ಊರವರು ಸೇರಿ ಕಳ್ಳನನ್ನು ಬೆನ್ನಟ್ಟುವಷ್ಟರಲ್ಲಿ  ಆತ ತಪ್ಪಿಸಿಕೊಂಡು ಬಂದ ಸ್ಕೂಟರ್‌ನಲ್ಲೇ ಪರಾರಿಯಾಗಿದ್ದಾನೆ. ಈ ಬಗ್ಗೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಸ್ಕೂಟರ್‌ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿ ಕಳ್ಳ ಪರಾರಿ

ಕಾಸರಗೋಡು: ಜಿಲ್ಲೆಯಲ್ಲಿ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ಕಳ್ಳರ ತಂಡ ಮತ್ತೆ ಸಕ್ರಿಗೊಳ್ಳತೊಡಗಿದೆ. ತೆಕ್ಕಿಲ್ ನಿವಾಸಿ ಗೋಪಿ ಎಂಬವರ   ಪತ್ನಿ ಇ. ಉಮಾವತಿ (೫೩) ಎಂಬವರು ನಿನ್ನೆ ಕಾವುಂಪಳ್ಳ-ಉಕ್ರಂಬಾಡಿ ಕ್ವಾಟರ್ಸ್ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಅಲ್ಲಿಗೆ ಬಂದ ಕಳ್ಳ ಅವರ ಕುತ್ತಿಗೆಯಲ್ಲಿದ್ದ ಐವತ್ತು ಸಾವಿರ ರೂ. ಮೌಲ್ಯದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಉಮಾವತಿಯವರು ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಇಂತಹ ಕಳ್ಳರ  ಬಗ್ಗೆ ಜನರು ಜಾಗ್ರತೆ ಪಾಲಿಸಬೇಕೆಂಬ ಸಲಹೆಯನ್ನು ಪೊಲೀಸರು ಇದೇ ವೇಳೆ   ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page