ಅಬಕಾರಿ ಕಾರ್ಯಾಚರಣೆಯಲ್ಲಿ 350 ಗ್ರಾಂ ಗಾಂಜಾ ಪತ್ತೆ: ಮಾದಕವಸ್ತು ಮಾರಾಟ ತಂಡದ ಓರ್ವ ಸೆರೆ; ಇನ್ನೋರ್ವ ಪರಾರಿ

ಕುಂಬಳೆ: ಮಂಜೇಶ್ವರದ ವಿವಿಧೆಡೆಗಳಿಗೆ ಗಾಂಜಾ ಸಾಗಾಟ ನಡೆಸಿ ಮಾರಾಟಗೈಯ್ಯುವ ತಂಡದ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈ ವೇಳೆ ಇನ್ನೋ ರ್ವ ಓಡಿ ಪರಾರಿಯಾಗಿದ್ದಾನೆ. ಬಂಧಿತನ ಕೈಯಿಂದ ೩೫೦ ಗ್ರಾಂ ಗಾಂಜಾ ವಶಪಡಿಸಲಾಗಿದೆ.

ಕಡಂಬಾರು ವಿಲ್ಲೇಜ್ ನ ಪಜಿಂಗಾರು ನಿವಾಸಿ ಅರುಣ (21) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.  ಜೋಡುಕಲ್ಲು ಬಳಿಯ ಮೂಡಂದೂರು ನಿವಾಸಿ ಅಬ್ದುಲ್ ಗಫೂರ್ ಬಿ.ಎಂ (33) ಎಂಬಾತ ಓಡಿ ಪರಾರಿಯಾಗಿದ್ದಾನೆಂದು ಈತನಿಗಾಗಿ ಶೋಧ ನಡೆಸುತ್ತಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅರುಣನನ್ನು ಒಂದನೇ ಆರೋಪಿಯಾಗಿ, ಅಬ್ದುಲ್ ಗಫೂರ್ ನನ್ನು ದ್ವಿತೀಯ ಆರೋಪಿಯಾಗಿ ಕೇಸು ದಾಖಲಿಸಲಾಗಿದೆ.

ನಿನ್ನೆ ಸಂಜೆ ಬೇಕೂರು ಭಾಗದಲ್ಲಿ ಕುಂಬಳೆ ರೇಂಜ್ ಅಬಕಾರಿ ಇನ್ ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅಬ್ದುಲ್ ಗಫೂರ್ ಓಡಿ ಪರಾರಿಯಾಗಿದ್ದಾನೆ. ಅರುಣನನ್ನು ಕಸ್ಟಡಿಗೆ ತೆಗೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಅಬ್ದುಲ್  ಗಫೂರ್ ಉಪ್ಪಳ ಕುಬಣೂರು, ಬಂದ್ಯೋಡು ಭಾಗಗಳಿಗೆ ಮಾದಕವಸ್ತು ಸಾಗಾಟ ನಡೆಸಿ ಮಾರಾಟ ನಡೆಸುವ ವ್ಯಕ್ತಿಯಾಗಿದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಪೊಲೀಸ್ ಠಾಣೆ ಹಾಗೂ ಅಬಕಾರಿ ಕೇಂದ್ರಗಳಲ್ಲಾಗಿ ಹಲವು ಎನ್‌ಡಿಪಿಎಸ್  ಪ್ರಕರಣಗಳಿವೆ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಜಾ ಭೇಟೆ ಕಾರ್ಯಾ ಚರಣೆಯಲ್ಲಿ ಅಬಕಾರಿ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್ ಎಂ.ಎಂ, ಸೂರ್ಜಿತ್ ಕೆ, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಬಿಜಿಲ ವಿ, ಸಿಇಒ ಚಾಲಕ ಪ್ರವೀಣ್ ಕುಮಾರ್ ಪಿ ಎಂಬಿವರಿದ್ದರು.

Leave a Reply

Your email address will not be published. Required fields are marked *

You cannot copy content of this page