ಆಶಾ ಕಾರ್ಯಕರ್ತೆಯರ ಸಂಘಟನೆಗಳೊಂದಿಗೆ ಜೂನ್ 30ರಂದು ಚರ್ಚೆ

ತಿರುವನಂತಪುರ: ಆಶಾ ಕಾರ್ಯಕರ್ತೆಯರು ಮುಂದಿರಿಸಿರುವ ಬೇಡಿಕೆಗಳ ಬಗ್ಗೆ  ಅಧ್ಯಯನ ನಡೆಸಲು ರಾಜ್ಯ ಸರಕಾರ ನಿಯೋಗಿಸಿದ ಸಮಿತಿ ಜೂನ್ ೩೦ರಂದು ಬೆಳಿಗ್ಗೆ 10.30ರಿಂದ ಆಶಾ ಕಾರ್ಯಕರ್ತರ ವಿವಿಧ ಸಂಘಟನೆಗಳು ಮತ್ತು ವಿವಿಧ ಟ್ರೇಡ್ ಯೂನಿಯನ್‌ಗಳ ಪ್ರತಿನಿಧಿಗಳಿಂದ ಪ್ರತ್ಯೇಕವಾಗಿ ಚರ್ಚೆ ನಡೆಸಿ, ಅವರ ಅಭಿಪ್ರಾಯ ಕ್ರೋಢೀಕರಿಸಲಿದೆ.

ಕಳೆದ ಫೆಬ್ರವರಿ 10ರಿಂದ ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಸತ್ಯಾಗ್ರಹ ಆರಂಭಿಸಿರುವ ಆಶಾ ಕಾರ್ಯಕರ್ತರ ಸಂಘಟನೆಗಳೊಂದಿಗೆ ರಾಜ್ಯ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಹರಿತ ವಿ. ಕುಮಾರ್ ಅಧ್ಯಕ್ಷೆಯಾಗಿರುವ ಸಮಿತಿ ಆಶಾ ಕಾರ್ಯಕರ್ತೆಯರೊಂದಿಗೆ ಮೊದಲು ಚರ್ಚೆ ನಡೆಸಲಿದೆ. ನಂತರ ಕೇರಳ ಸ್ಟೇಟ್ ಆಶಾ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಆಲ್ ಕೇರಳ ಪ್ರದೇಶ್ ಆಶಾ ವರ್ಕರ್ ಕಾಂಗ್ರೆಸ್ (ಐಎನ್‌ಟಿಯುಸಿ) ಆಶಾ ವರ್ಕರ್ಸ್ ಫೆಡರೇಶನ್ (ಎಸ್‌ಟಿಯು) ಮೊದಲಾದ ಸಂಘಟನೆಗಳೊಂದಿಗೂ ಸಮಿತಿ ಚರ್ಚೆ ನಡೆಸಿ ಅವುಗಳ ಅಭಿಪ್ರಾಯ ಆಲಿಸಲಿದೆ. ಬಳಿಕ ಅದನ್ನೆಲ್ಲಾ ಕ್ರೋಢೀಕರಿಸಿ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಅದನ್ನು ಪರಿಶೀಲಿಸಿ ಆ ವಿಷಯದಲ್ಲಿ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page