ಉಕ್ಕಿ ಹರಿದ ಸುವರ್ಣಗಿರಿ ಹೊಳೆ: ಕ್ಷೇತ್ರ, ಮನೆಗಳು ಜಲಾವೃತ; ಮನೆಗಳ ಮೇಲೆ ಗುಡ್ಡೆ ಕುಸಿತ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆ ಉಕ್ಕಿ ಹರಿದ ಪರಿಣಾಮ ಅಲ್ಲಿ ಶ್ರೀ ಶಾಸ್ತಾವುಕ್ಷೇತ್ರ ಸಮೀಪದಲ್ಲಿರುವ ಅರ್ಚಕರ ಮನೆಗೆ ನೀರು ನುಗ್ಗಿದೆ. ಅಲ್ಲದೆ ಪರಿಸರ ಪ್ರದೇಶದಲ್ಲಿರುವ ತೋಟ ಹಾಗೂ ಮನೆಗಳಿಗೂ ನೀರು ನುಗ್ಗಿದೆ.  ಕುಬಣೂರು ರಸ್ತೆಯಲ್ಲಿ ನೀರು ತುಂಬಿ ಕೊಂಡು ಶಾಂತಿಗುರಿ-ಕುಬಣೂರು-ವಿದ್ಯಾನಗರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಲಾಲ್‌ಬಾಗ್‌ನಿಂದ ಶಿರಂತಡ್ಕಕ್ಕೆ ತೆರಳುವ  ರಸ್ತೆಗೆ ಗುಡ್ಡೆ ಕುಸಿದಿದೆ. ಇದರಿಂದ ಎಚ್.ಟಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ.

ಬಂಗ್ರಮಂಜೇಶ್ವರ, ಕಣ್ವತೀರ್ಥ ಪರಿಸರ ಪ್ರದೇಶ ಜಲಾವೃತ ಗೊಂಡಿದೆ.  ಸಮುದ್ರ ತೀರದಲ್ಲಿರುವ ಮನೆಗಳಿಗೆ ನೀರು ತುಂಬಿಕೊಂಡಿದ್ದು, ಅಪಾಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಳ ಅಗ್ನಿಶಾಮಕದಳ, ಪೊಲೀಸರು ಹಾಗೂ ನಾಗರಿಕರು ಸೇರಿ ಅಪಾಯ ಭೀತಿ ಎದುರಿಸುವ ಮನೆಗಳಿಂದ  ಕುಟುಂಬಗಳ ಸದಸ್ಯರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ನೀರು ತುಂಬಿಕೊಂಡು ಮನೆಗಳಿಗೂ ನುಗ್ಗಿದೆ. ಹೊಸಂಗಡಿ ಪೇಟೆಯಲ್ಲಿ  ಸುಮಾರು 20ಕ್ಕೂ ಹೆಚ್ಚು ಅಂಗಡಿ, ಹೋಟೆಲ್‌ಗಳಿಗೆ ನೀರು ನುಗ್ಗಿದ್ದು, ಆಹಾರ ವಸ್ತುಗಳು ನಾಶಗೊಂಡಿವೆ. ರಾಷ್ಟ್ರೀಯ ಹೆದ್ದಾರಿ ಬದಿ ಚರಂಡಿ ಅವ್ಯವಸ್ಥೆಯಿಂದಾಗಿ ಇಲ್ಲಿ ವ್ಯಾಪಾರ ಸಂಸ್ಥೆಗಳಿಗೆ ನೀರು ನುಗ್ಗಿರುವುದಾಗಿ ವ್ಯಾಪಾರಿಗಳು ದೂರುತ್ತಿದ್ದಾರೆ.

ಅಟ್ಟೆಗೋಳಿಯಲ್ಲಿ ಧನು ಆಚಾರ್ಯ ಎಂಬವರ  ಹೊಸ ಮನೆ ಮೇಲೆ  ಸಮೀಪದ ಗುಡ್ಡೆ ಹಾಗೂ ಮರ ಬಿದ್ದಿದೆ. ಹೇರೂರು ಪಾಂಡಿಬಯಲು ಎಂಬಲ್ಲಿ ಮನೆಗೆ ಗುಡ್ಡೆ ಕುಸಿದು ಹಾನಿಯುಂಟಾಗಿದೆ.

ಮಂಜೇಶ್ವರ ಗ್ರಾಮ ಪಂಚಾಯತ್‌ನ  ಗೇರುಕಟ್ಟೆ ಎಂಬಲ್ಲಿನ ಎಆರ್‌ಬಿ 12 ನಂಬ್ರದ ರೇಶನ್ ಅಂಗಡಿಗೆ ನೀರು ನುಗ್ಗಿ ಅದರಲ್ಲಿದ್ದ ಸಾಮಗ್ರಿಗಳೆಲ್ಲವೂ ನಾಶಗೊಂಡಿವೆ. ಇದರಿಂದಾಗಿ ರೇಶನ್ ಅಂಗಡಿಯ   ಕಾರ್ಡ್‌ದಾರರಿಗೆ ಸಾಮಗ್ರಿ ಲಭಿಸದ ಸ್ಥಿತಿ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page