ಏಷ್ಯಾದಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು: ಭಾರತದಲ್ಲ್ಲಿ ಜಾಗ್ರತಾ ನಿರ್ದೇಶ
ನವದೆಹಲಿ: 2019-20 ರಲ್ಲಿ ಇಡೀ ಜಗತ್ತನ್ನೇ ತಲ್ಲಣ ಗೊಳಿಸಿದ್ದ ಕೊರೊನಾ ಮಹಾಮಾರಿ ಸೋಂಕು ಇದೀಗ ಮತ್ತೆ ವಕ್ಕರಿಸಿದೆ. ಈಗಾಗಲೇ ಸಿಂಗಾಪೂರ್, ಹಾಂಕಾಂಗ್, ಚೀನಾದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ ಭಾರತಕ್ಕೂ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೇಂದ್ರ ಆರೋಗ್ಯ ಸಚಿವಾಲಯ ಸಂಬಂಧಪಟ್ಟವರೊಂದಿಗೆ ಈಗಾಗಲೇ ಮಹತ್ವದ ಸಭೆ ನಡೆಸಿ ಅಗತ್ಯದ ಮುಂಜಾಗ್ರತಾ ಕ್ರಮಗಳಿಗೆ ನಿರ್ದೇಶ ನೀಡಿದೆ.
ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ, ತುರ್ತು ವೈದ್ಯಕೀಯ ಪರಿಹಾರ ವಿಭಾಗ, ವಿಪತ್ತು ನಿರ್ವಹಣಾ ಕೋಶ, ಸಂಶೋಧನಾ ಮಂಡಳಿಯ ಅಧಿಕಾರಿಗಳೊಂದಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧಿಕಾರಿಗಳು ಹಾಗೂ ಆರೋಗ್ಯ ಸೇವಾ ಮಹಾ ನಿರ್ದೇಶಕರ ನೇತೃತ್ವದಲ್ಲಿ ಈ ಸಭೆ ನಡೆದಿದೆ.
ಪ್ರಸ್ತುತ ಭಾರತದಲ್ಲಿ ಸೋಂಕು ಪ್ರಕರಣಗಳು ನಿಯಂತ್ರಣದಲ್ಲಿದೆ. ಭಾರತದಲ್ಲಿ ಕೆಲವರಿಗೆ ಈ ಸೋಂಕು ತಗಲಿದ್ದು, ಆದ್ದರಿಂದ ಇನ್ನಷ್ಟು ಗರಿಷ್ಠ ನಿರ್ದೇಶ ನೀಡಲಾಗಿದೆ. ಭಾರತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬಹುತೇಕ ಪ್ರಕರಣಗಳು ಸೌಮ್ಯವಾಗಿವೆ. ತೀವ್ರವಾಗುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ದೇಶದ ದೊಡ್ಡ ಜನಸಂಖ್ಯೆಯನ್ನು ಗಮನದಲ್ಲಿರಿ ಸಿಕೊಂಡು ಆಲೋಚಿಸಿದರೆ ಭಾರತದಲ್ಲಿ ಪ್ರಸ್ತುತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯದ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಮಾತ್ರವಲ್ಲ ಈ ಬಗ್ಗೆ ಎಲ್ಲಾ ರಾಜ್ಯ ಸರಕಾರಗಳಿಗೂ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿರ್ದೇಶವನ್ನು ನೀಡಿದೆ.