ಕನಿಯಾಲ: ಶ್ರೀ ಶಾರದಾ ಯಕ್ಷಗಾನ ಕಲಾಕೇಂದ್ರ ಉದ್ಘಾಟನೆ, ಸನ್ಮಾನ ನಾಳೆ
ಧರ್ಮತ್ತಡ್ಕ: ಶ್ರೀ ಶಾರದಾ ಯಕ್ಷಗಾನ ಕಲಾಕೇಂದ್ರ ಕನಿಯಾಲ ಇದರ ಉದ್ಘಾಟನೆ ಹಾಗೂ ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಸಾಧಕರಿಗೆ ಸನ್ಮಾನ, ವಿವಿಧ ರಂಗಗಳಲ್ಲಿ ದುಡಿಯುತ್ತಿರುವ ಸ್ಥಳೀಯರಿಗೆ ಅಭಿನಂದನಾ ಕಾರ್ಯಕ್ರಮ ನಾಳೆ ಕನಿಯಾಲ ಶ್ರೀ ಶಾರದಾ ಎಎಲ್ಪಿ ಶಾಲೆಯಲ್ಲಿ ನಡೆಯಲಿದೆ. ಸಂಜೆ 6.30ಕ್ಕೆ ದೀಪ ಪ್ರಜ್ವಲನೆ, ಬಳಿಕ ಮಕ್ಕಳ ಯಕ್ಷಗಾನ ಪ್ರದರ್ಶ ಗೊಳ್ಳಲಿದೆ. ರಾತ್ರಿ 8.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಲಾಕೇಂದ್ರದ ಅಧ್ಯಕ್ಷ ವಿಷ್ಣು ಭಟ್ ಚಾಕಟೆಗುಳಿ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ರಾಮಕೃಷ್ಣ ಭಟ್ ಪೆರುವೋಡಿ, ಪುಷ್ಪಲಕ್ಷ್ಮೀ, ಸುಮನ ಆರ್. ಭಟ್ ಸಹಿತ ಹಲವು ಮಂದಿ ಉಪಸ್ಥಿತರಿರುವರು. ಈ ವೇಳೆ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರೀ, ನಾಟ್ಯಗುರು ರಮೇಶ್ ಶೆಟ್ಟಿ ಬಾಯಾರು, ವೇಷಧಾರಿ ರಮೇಶ್ ಭಟ್ ಸರವು ಇವರನ್ನು ಸನ್ಮಾನಿಸಲಾಗುವುದು. ಹಿಮ್ಮೇಳ ವಾದಕರಾದ ಶಂಕರ ಭಟ್ ನಿಡುವಾಜೆ, ರಾಮಮೂರ್ತಿ ಕುದ್ರೆಕೊಡ್ಲು, ದೈವ ನರ್ತಕ ಶಿವಪ್ಪ ನಲಿಕೆ, ಯುವ ಕೃಷಿಕ ಉದಯ ಗುತ್ತು, ಯಕ್ಷಗಾನ ಕಲಾವಿದ ಕೃಷ್ಣಪ್ಪ ಆಚಾರ್ಯ ಕೊಂದಲಕೋಡಿ, ಚಾಲಕರಾದ ಚಂದ್ರಶೇಖರ ಧರ್ಮಡ್ಕ, ವಿಶ್ವನಾಥ ರೂಪಾಯಿಮೂಲೆ, ಸಂಜೀವ ಚಾಕಟೆಗುಳಿ, ಸತ್ತರ್ ಬಳ್ಳೂರು ಇವರನ್ನು ಅಭಿನಂದಿಸಲಾಗುವುದು. ಸಂದೇಶ್ ಸೈಪಂಗಲ್ಲು, ರವಿಪ್ರಕಾಶ ಸುದೆಂಬಳ, ವಿವೇಕ್ ಆದಿತ್ಯ ಭಾಗವಹಿಸುವರು. 9.30ರಿಂದ ‘ಮಹಿಷಾ ಮರ್ದಿನಿ-ಶಾಂಭವಿ ವಿಜಯ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.