ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ : ಭದ್ರತೆಗಾಗಿ 2000 ಪೊಲೀಸ್, ಭದ್ರತಾಪಡೆ ನಿಯೋಜನೆ
ಕಾಸರಗೋಡು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಗಿದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ 45 ಗಂಟೆಗಳ ಧ್ಯಾನಕ್ಕಾಗಿ ಇಂದು ಸಂಜೆ ಕನ್ಯಾಕುಮಾರಿ ಸ್ವಾಮಿ ವಿವೇಕಾನಂದ ಬಂಡೆ ಸ್ಮಾರಕಕ್ಕೆ ಆಗಮಿಸಲಿದ್ದಾರೆ. ಇದರಿಂದಾಗಿ ಧ್ಯಾನದ ವೇಳೆ ಆ ಪ್ರದೇಶದ ಎಲ್ಲೆಡೆಗಳಲ್ಲೂ ಬಿಗಿ ಭದ್ರತೆ ಹಾಗೂ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಇದಕ್ಕಾಗಿ ೨೦೦೦ ಪೊಲೀಸರು ಮತ್ತು ಭಧ್ರತಾಪಡೆಯನ್ನು ನಿಯೋಜಿಸಲಾಗಿದೆ.
ನಿಗದಿತ ವೇಳಾಪಟ್ಟಿ ಪ್ರಕಾರ ಪ್ರಧಾನಿ ಇಂದು ಸಂಜೆಯಿಂದ ಜೂನ್ 1ರ ಸಂಜೆ ತನಕ ವಿವೇಕಾನಂದ ಬಂಡೆಯಲ್ಲಿ ಧ್ಯಾನ ಮಾಡಲಿದ್ದಾರೆ. ಆದ್ದರಿಂದ ಈ ಎರಡು ದಿನ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಆ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಮೋದಿ ಯವರು ಇಂದು ಸಂಜೆ 4.35ಕ್ಕೆ ಕನ್ಯಾಕುಮಾರಿಯ ಸೂರ್ಯಾಸ್ತಮಾನ ವನ್ನು ವೀಕ್ಷಿಸುವರು. ನಂತರ ಧ್ಯಾನದಲ್ಲಿ ತೊಡಗುವರು. ಜೂನ್ 1ರಂದು ಅಪರಾಹ್ನ 3.30ಕ್ಕೆ ಧ್ಯಾನ ಮುಗಿಸಿ ದೆಹಲಿಗೆ ವಾಪಾಸಾಗುವರು. ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆ ಕಡಲ ಗಡಿಗಳಲ್ಲಿ ಇಂದು ಬೆಳಿಗ್ಗಿನಿಂದಲೇ ಕಣ್ಗಾವಲು ಏರ್ಪಡಿಸಿದೆ. ಈ ಪ್ರದೇಶದಲ್ಲಿ ಖಾಸಗಿ ದೋಣಿಗಳನ್ನು ಚಲಾಯಿಸುವ ಅನುಮತಿಯನ್ನು ನಿಷೇಧಿಸಲಾಗಿದೆ.