ಕಲ್ಲಿಕೋಟೆಯಲ್ಲಿ ವಾಯುದಾಳಿ ತಡೆ ಕೇಂದ್ರ ಸ್ಥಾಪಿಸಲು ತೀರ್ಮಾನ
ಕಲ್ಲಿಕೋಟೆ: ಕ್ಷಿಪಣಿ ದಾಳಿಯನ್ನು ತಡೆಯಲು ಸಾಮರ್ಥ್ಯ ಹೊಂದಿರುವ ಏರ್ ರಾಡರ್ ಡಿಫೆನ್ಸ್ ಒಳಗೊಂಡ ಭಾರತೀಯ ವಾಯುದಾಳಿ ತಡೆಯುವ ಕೇಂದ್ರವನ್ನು ಕಲ್ಲಿಕೋಟೆಯಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಕಲ್ಲಿಕೋಟೆ ಜಿಲ್ಲೆಯ ಕಡಲುಂಡಿ ಗ್ರಾಮದಲ್ಲಿ 40 ಎಕ್ರೆ ಭೂಮಿಯನ್ನು ಬಿಟ್ಟುಕೊಡಲು ರಾಜ್ಯ ಸರಕಾರ ಮುಂದಾಗಿದೆ. ಈ ಜಾಗವನ್ನು ಬಿಟ್ಟುಕೊಡುವಂತೆ ಏರ್ಫೋರ್ಸ್ ಕಮಾಂಡಿಂಗ್ ಆಫೀಸರ್ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಈ ಜಾಗವನ್ನು ವಾಯುಪಡೆಗಾಗಿ ಬಿಟ್ಟುಕೊಡುವ ಅಗತ್ಯದ ಕ್ರಮದಲ್ಲಿ ಕಲ್ಲಿಕೋಟೆ ಜಿಲ್ಲಾಧಿಕಾರಿ ತೊಡಗಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ ಘರ್ಷಣೆ ಆರಂಭಗೊಂಡಿರುವುದನ್ನು ಪರಿಗಣಿಸಿ ದಕ್ಷಿಣ ಭಾರತದ ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಕಲ್ಲಿಕೋಟೆಯಲ್ಲಿ ವಾಯುದಾಳಿ ತಡೆ ಕೇಂದ್ರ ಸ್ಥಾಪಿಸುವ ತೀರ್ಮಾನಕ್ಕೆ ಕೇಂದ್ರ ಸರಕಾರ ಬಂದಿದೆ.
ಕೇರಳ ಸೇರಿದಂತೆ ದಕ್ಷಿಣ ಭಾರತಕ್ಕೂ ಶತ್ರು ದೇಶಗಳು ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ ಕಲ್ಲಿಕೋಟೆಯಲ್ಲಿ ಕೇಂದ್ರ ಆರಂಭಿಸುವ ತೀರ್ಮಾನಕ್ಕೆ ಬಂದಿದೆ.