ಗೋವಾದಲ್ಲಿ ಕೆಲಸಕ್ಕೆ ತೆರಳಿದ ಅಡೂರು ನಿವಾಸಿ ನಾಪತ್ತೆ
ಮುಳ್ಳೇರಿಯ: ಗೋವಾದ ರಬ್ಬರ್ ತೋಟದಲ್ಲಿ ಕೆಲಸಕ್ಕೆಂದು ತೆರಳಿದ ಅಡೂರು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಅಡೂರು ನಾಗತ್ತುಮೂಲೆ ನಿವಾಸಿ ಕಣ್ಣನ್ ಎಂಬವರ ಪುತ್ರ ಮರುವನ್ (45) ನಾಪತ್ತೆಯಾದ ವ್ಯಕ್ತಿ. ಈ ತಿಂಗಳ 17ರಂದು ಇತರ ಏಳು ಮಂದಿಯೊಂದಿಗೆ ಮರುವನ್ ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದರು. ಈ ಮಧ್ಯೆ ಓರ್ವನಿಗೆ ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಆತನನ್ನು ಕರೆದುಕೊಂಡು ಮರುವನ್ ಗೋವಾದಿಂದ ಊರಿಗೆ ಹೊರಟಿದ್ದರು. ಈ ವೇಳೆ ಮಡ್ಗೋವಾಕ್ಕೆ ತಲುಪಿದಾಗ ಮರುವನ್ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಅವರ ಜತೆಗಿದ್ದ ವ್ಯಕ್ತಿ ಊರಿಗೆ ತಲುಪಿದ ಬಳಿಕ ಘಟನೆ ಬಗ್ಗೆ ಮನೆಯವರಲ್ಲಿ ತಿಳಿಸಿದ್ದಾನೆನ್ನಲಾಗಿದೆ. ಈ ಕುರಿತಾಗಿ ಮರುವನ್ರ ಸಹೋದರ ಚಂದ್ರನ್ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.