ಜಪ್ತಿ ನೋಟೀಸು: ಹೈನುಗಾರಿಕಾ ಕೃಷಿಕ ಆತ್ಮಹತ್ಯೆಗೆ ಶರಣು
ಕಣ್ಣೂರು: ಬ್ಯಾಂಕ್ನಿಂದ ಜಪ್ತಿ ನೋಟೀಸು ಲಭಿಸಿದ ಹೈನುಗಾರಿಕಾ ಕೃಷಿಕ ಆತ್ಮಹತ್ಯೆಗೆ ಶರಣಾದ ಘಟನೆ ಕಣ್ಣೂರಿನ ಫೆರಾವೂರಿನಲ್ಲಿ ನಡೆದಿದೆ. ಫೆರಾವೂರು ಕೋಳಾಕಾಡಿನ ಮುಂಡಕ್ಕಲ್ ಎಂ.ಆರ್. ಅಲ್ಬರ್ಟ್ (೬೮) ಸಾವನ್ನಪ್ಪಿದ ವ್ಯಕ್ತಿ. ಇವರು ಇಂದು ಮುಂಜಾನೆ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ವೇಳೆ ಅವರ ಪತ್ನಿ ಇಗರ್ಜಿಗೆ ಹೋಗಿದ್ದರು. ಸಾಲ ಪಡೆದು ಅದನ್ನು ಸಕಾಲದಲ್ಲಿ ಮರುಪಾವತಿಸದ ಕಾರಣ ನೀಡಿ ಕೇರಳ ಬ್ಯಾಂಕ್ನ ಫೆರಾವೂರು ಶಾಖೆಯಿಂದ ಅಲ್ಬರ್ಟ್ ಮೊನ್ನೆ ಜಪ್ತಿ ನೋಟೀಸು ಲಭಿಸಿತ್ತು. ನ. ೨೮ರೊಳಗಾಗಿ ಸಾಲದ ಹಣ ಮರುಪಾವತಿಸುವಂತೆಯೂ ತಪ್ಪಿದಲ್ಲಿ ಜಪ್ತಿ ಕ್ರಮ ಅನುಸರಿಸುವುದಾಗಿಯೂ ಬ್ಯಾಂಕ್ ನೋಟೀಸಿನಲ್ಲಿ ತಿಳಿಸಲಾಗಿತ್ತು. ಈಮಧ್ಯೆ ಅಲ್ಭರ್ಟ್ ಕುಟುಂಬಶ್ರೀ ಯಿಂದ ಹಣ ಪಡೆಯಲೆತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಮೃತರು ಕಾಂಗ್ರೆ ಸ್ನ ಓರ್ವ ಸಕ್ರಿಯ ಕಾರ್ಯಕರ್ತನಾಗಿದ್ದರು.