ಜಿಲ್ಲೆಯ ಮೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ : ಬದಿಯಡ್ಕದಲ್ಲಿ ಲಂಚ ಸ್ವೀಕಾರ ಪತ್ತೆ
ಕಾಸರಗೋಡು: ಕಾಸರ ಗೋಡು, ಬದಿಯಡ್ಕ ಹಾಗೂ ನೀಲೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ವಿಜಿಲೆನ್ಸ್ ಅಧಿ ಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ಪೈಕಿ ಬದಿಯಡ್ಕ ಸಬ್ ರಿಜಿಸ್ಟ್ರೇಷನ್ ಕಚೇರಿಯಲ್ಲಿ ನಡೆಸಿದ ತಪಾಸಣೆ ವೇಳೆ ನಾಲ್ವರು ಸಿಬ್ಬಂದಿಗಳಿಗೆ ಕೆಲವು ದಸ್ತಾವೇಜು ಬರಹಗಾರರು ಗೂಗಲ್ ಪೇ ಮೂಲಕ 1.89 ಲಕ್ಷ ರೂ. ನೀಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ರಾಜ್ಯ ವಿಜಿಲೆನ್ಸ್ ನಿರ್ದೇ ಶಕರಿಗೆ ವರದಿ ಸಲ್ಲಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ವಿಜಿಲೆನ್ಸ್ ಘಟಕದ ಇನ್ಸ್ಪೆಕ್ಟರ್ ಪಿ. ನಾರಾಯಣನ್ರ ನೇತೃತ್ವದ ತಂಡ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಪಾಸಣೆ ನಡೆಸಿದೆ. ಕಾಸರಗೋಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿಜಿಲೆನ್ಸ್ ಡಿವೈಎಸ್ಪಿ ವಿ. ಉಣ್ಣಿಕೃಷ್ಣನ್ ಮತ್ತು ನೀಲೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿಜಿಲೆನ್ಸ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.