ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಪಟ್ಟಾ ಶೀಘ್ರ ವಿತರಣೆ

ಕಾಸರಗೋಡು: ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಶೀಘ್ರದಲ್ಲೇ ಭೂಮಿಯ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಗೋತ್ರ ವಿಭಾಗವಾದ ಕೊರಗ ಕುಟುಂಬಗಳ ಭೂಮಿಗೆ ಹಕ್ಕುಪತ್ರ ದೊರಕಿಸುವ ನೂತನ ಯೋಜನೆಯಾದ ಆಪರೇಶನ್ ಸ್ಮೈಲ್ ಚಟುವಟಿಕೆ ಕುರಿತು ಅವಲೋಕನ ನಡೆಸಲು ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರಿಸಲಾಯಿತು.

ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ, ಸರ್ವೇ, ಪರಿಶಿಷ್ಟ ವರ್ಗ  ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು. ಪ್ರಸ್ತುತ ಜಿಲ್ಲೆಯ ಎಲ್ಲಾ ಕೊರಗ ಸಮುದಾಯದವರ ಭೂಮಿ ಅಳೆದು ನಿಗದಿ ಪಡಿಸಲಾಗಿದೆ. ಎಲ್ಲರ ಭೂಮಿಗೂ ಪಟ್ಟಾ ನೀಡಲು ಸಂಬಂಧಪಟ್ಟ ಬೇಕಾದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಹಶೀಲ್ದಾರರಿಗೆ ನಿರ್ದೇಶಿಸಿದರು. ಪ್ರಸ್ತುತ 71 ಕುಟುಂಬಗಳಿಗೆ ಪಟ್ಟಾ ವಿತರಿಸಲು ಸಾಧ್ಯವಾಗುವ ರೀತಿಯಲ್ಲಿ ದಾಖಲೆಪತ್ರ ಸಿದ್ಧಪಡಿ ಸಲಾಗಿದೆ. ಗ್ರಾಮಾಧಿಕಾರಿಗಳ ಸಹಾಯದೊಂದಿಗೆ ಈ ಬಗ್ಗೆಗಿನ ಚಟುವಟಿಕೆ ತ್ವರಿತಗೊಳಿಸಿ ಯೋಜನೆ ಜ್ಯಾರಿಗೊಳಿಸಲು ಸಾಧ್ಯವಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ವಾಸಿಸುವ ೫೩೯ ಕುಟುಂಬಗಳ ೧೭೦೬ರಷ್ಟು ಕೊರಗ ಗೋತ್ರ ವಿಭಾಗದವರಿಗೆ ಭೂಮಿಯ ಹಕ್ಕು ಪತ್ರ ಖಚಿತಪಡಿಸುವಾಗ ವಸತಿಯೋಜನೆಗಳ ಸಹಿತ ಎಲ್ಲಾ ಸರಕಾರಿ ಸೌಲಭ್ಯಗಳನ್ನು ದೊರಕಿಸುವುದು ಆಪರೇಶನ್ ಸ್ಮೈಲ್‌ನ ಗುರಿಯಾಗಿದೆ. ಸಭೆಯಲ್ಲಿ ಎಲ್‌ಆರ್ ಡೆಪ್ಯುಟಿ ಕಲೆಕ್ಟರ್ ಸಿ.ಕೆ. ಶಾಜಿ ಎಲ್.ಎ. ಡೆಪ್ಯುಟಿ ಕಲೆಕ್ಟರ್ ಎಂ.ರಮೀಸ್ ರಾಜ, ಎಟಿಡಿಒ ಕೆ.ವಿ. ರಾಘವನ್, ಸರ್ವೇ ಡೆಪ್ಯುಟಿ ಡೈರೆಕ್ಟರ್ ಕೆ. ಜಯಕುಮಾರ್, ಸರ್ವೆ ಟೆಕ್ನಿಕಲ್ ಅಸಿಸ್ಟೆಂಟ್ ಕೆ.ಪಿ. ಗಂಗಾಧರನ್ ತಹಶೀಲ್ದಾರ್‌ಗಳಾದ ಎಂ. ಶ್ರೀನಿವಾಸ್, ಡೋನಲ್ ಲಾಸ್, ಗ್ರಾಮಾಧಿಕಾರಿಗಳು ಭಾಗವಹಿಸಿದರು.

RELATED NEWS

You cannot copy contents of this page