ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಶೇ. 12 ಲಾಭಾಂಶ ಘೋಷಣೆ
ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ನೀರ್ಚಾಲು ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿತು. ಆಡಳಿತಮಂಡಳಿ ಅಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕ ವರ್ಷದಲ್ಲಿ ಸದಸ್ಯರಿಗೆ ಶೇ.12 ಲಾಭಾಂಶ ಘೋಷಣೆ ಮಾಡಿದರು. ಕಾರ್ಯದರ್ಶಿ ಅಜಿತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಾರ್ಷಿಕ ಅಂಕಿ ಅಂಶಗಳ ಪ್ರಕಾರ ಬ್ಯಾಂಕ್ 203.56 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರವನ್ನು ನಡೆಸಿರುತ್ತದೆ. 42.14 ಲಕ್ಷ ರೂ.ಗಳ ನಿರ್ವಹಣಾ ಲಾಭವನ್ನು ಗಳಿಸಿದೆ. ನಿರ್ದೇಶಕರು ಗಳಾದ ರವಿ ನೀರ್ಚಾಲು, ಸುಬ್ರಹ್ಮಣ್ಯ ಭಟ್ ಏನಂಕೂಡ್ಲು, ಅಜೇಯ ಖಂಡಿಗೆ, ಶ್ರೀಕೃಷ್ಣ ಭಟ್ ವಳಕ್ಕುಂಜ, ಶ್ಯಾಂಭಟ್, ಸ್ಮಿತಾ, ರಮ್ಯಾ, ವಿದ್ಯಾಶಂಕರಿ ವಾಶೆಮನೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಲ್ಲಿ ಹತ್ತನೇ ತರಗತಿ ಹಾಗೂ ಪ್ಲಸ್ಟುವಿನಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾ ಯಿತು. ಉಪಾಧ್ಯಕ್ಷ ಅವಿನಾಶ್ ರೈ ಸ್ವಾಗತಿಸಿ, ನಿರ್ದೇಶಕ ರಾಮಪ್ಪ ಮಂಜೇಶ್ವರ ವಂದಿಸಿದರು.