ಪೈವಳಿಕೆ ಪಂ. ವ್ಯಾಪ್ತಿಯಲ್ಲಿ ವಿವಿಧ ಕಡೆ ಗುಡ್ಡೆ ಕುಸಿತ: ರಸ್ತೆ ಸಂಚಾರ ಭೀತಿಯಲ್ಲಿ
ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿರುವ ಗುಡ್ಡೆ ಕುಸಿದು ಬಿದ್ದು ಸಂಚಾರಕ್ಕೆ ಆತಂಕ ಉಂಟಾಗಿದೆ. ಮುಳಿಗದ್ದೆ ಸಮೀಪದ ಕಲ್ಲಗದ್ದೆ-ಸುದೆಂಬಳ ಸಡಕ್ ರಸ್ತೆಯಲ್ಲಿ ಗುಡ್ಡೆ ಕುಸಿದು ಬಿದ್ದಿದ್ದು, ಮಣ್ಣು ರಸ್ತೆಯಲ್ಲಿ ಉಳಿದುಕೊಂಡಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಸಿದು ಬಿದ್ದಿದೆ. ಈ ರಸ್ತೆಯ ಇನ್ನಿತರ ಕಡೆಗಳಲ್ಲಿ ಈ ಹಿಂದೆ ಗುಡ್ಡೆ ಕುಸಿದು ಬಿದ್ದು ರಸ್ತೆಯಲ್ಲಿರುವ ಮಣ್ಣನ್ನು ಇನ್ನೂ ತೆರವುಗೊಳಿಸಲಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆ ಕನಿಯಾಲ, ಬಾಯಾರು, ಧರ್ಮತ್ತಡ್ಕ, ಮುಳಿಗದ್ದೆ ಸಹಿತ ವಿವಿಧ ಪ್ರದೇಶಗಳಿಗೆ ಹತ್ತಿರದ ದಾರಿಯಾಗಿದೆ. ನೂರಾರು ವಾಹನಗಳು ಸಂಚರಿಸುತ್ತಿದೆ. ಬಾಯಾರು ಬಳಿಯ ಸಜಂಕಿಲ ಆವಳ ರಸ್ತೆಯ ದೈತೋಟ ಎಂಬಲ್ಲಿ ಭಾರೀ ಗಾತ್ರದಲ್ಲಿ ಗುಡ್ಡೆ ಕುಸಿದು ಬಿದ್ದಿದೆ. ನಿತ್ಯ ವಾಹನಗಳು ಹಾಗೂ ಪಾದಚಾರಿಗಳ ಸಂಚಾರ ಇರುವ ಪ್ರದೇಶವಾಗಿದ್ದು, ಗುಡ್ಡೆ ಕುಸಿತದಿಂದ ಸ್ಥಳೀಯರಲ್ಲಿ ಭೀತಿ ಸೃಷ್ಟಿಯಾಗಿದೆ. ರಸ್ತೆ ಬದಿಯಲ್ಲಿರುವ ಗುಡ್ಡೆ ಪ್ರದೇಶದಲ್ಲಿ ಕಾಂಕ್ರೀಟ್ನಿAದ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.