ಪೊಲೀಸರ ಮೇಲೆ ಹಲ್ಲೆ: ಆಟೋ ಚಾಲಕ ಸೆರೆ
ಕಾಸರಗೋಡು: ಚೌಕಿಯಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಎಸ್ಐಯ ಸಮವಸ್ತ್ರ ಹಿಡಿದೆಳೆದು ನೇಮ್ಪ್ಲೇಟ್ ಹಾನಿಗೊಳಿಸಿ, ಪೊಲೀಸರಿಗೆ ತುಳಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯಾದ ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿ ಎಂ. ಮುಹಮ್ಮದ್ ಶರೀಫ್ (40) ಎಂಬಾತನನ್ನು ನಗರ ಠಾಣೆ ಎಸ್ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ.
ನಿನ್ನೆ ಸಂಜೆ ೭ ಗಂಟೆಗೆ ಚೌಕಿ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಕಾಸರಗೋಡು ಟೌನ್ ಎಸ್.ಐ. ಎನ್. ಅನ್ಸಾರ್, ಸಿವಿಲ್ ಪೊಲೀಸ್ ಆಫೀಸರ್ ಸನೀಶ್, ಜೋಸೆಫ್ ಎಂಬಿವರ ಮೇಲೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮುಹಮ್ಮದ್ ಶರೀಫ್ ಆಟೋ ರಿಕ್ಷಾ ಸಹಿತ ತಲುಪಿದ್ದಾನೆ. ಆಟೋ ರಿಕ್ಷಾವನ್ನು ಕೈ ತೋರಿಸಿ ನಿಲ್ಲಿಸಿ ಲೈಸನ್ಸ್ ಕೇಳಿದಾಗ ಎಸ್ಐಯ ಸಮವಸ್ತ್ರವನ್ನು ಹಿಡಿದೆಳೆದು ನೇಮ್ಪ್ಲೇಟ್ನ್ನು ಹಾನಿಗೊಳಿಸಿದ್ದು, ತಡೆಯಲು ಪ್ರಯತ್ನಿಸಿದ ಪೊಲೀಸ್ನನ್ನು ತುಳಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.