ಫೆ.೧೩ರಂದು ವ್ಯಾಪಾರಿಗಳ ಚಳವಳಿಗೆ ಐ.ಎಸ್.ಎಂ.ಎ ಬೆಂಬಲ
ಕಾಸರಗೋಡು: ಸಂದಿಗ್ಧತೆ ಯಲ್ಲಿ ಸಿಲುಕಿದ ಕಿರು ವ್ಯಾಪಾರಿಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಕವಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಈ ತಿಂಗಳ ೧೩ರಂದು ಅಂಗಡಿ ಮುಚ್ಚಿ ನಡೆಸುವ ಮುಷ್ಕರಕ್ಕೆ ಇಂಡಿಪೆಂಡೆನ್ಸ್ ಸ್ಕ್ರಾಪ್, ಮರ್ಚೆಂಟ್ಸ್ ಅಸೋಸಿಯೇಶನ್ (ಐಎಸ್ಎಂಎ) ರಾಜ್ಯ ಸೆಕ್ರೆಟರಿಯೇಟ್ ಸಭೆ ಬೆಂಬಲ ಸೂಚಿಸಿದೆ. ಸಂದಿಗ್ಧತೆಗೊಳಗಾದ ಕಿರು ವ್ಯಾಪಾರ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದೂ ಸಭೆ ಒತ್ತಾಯಿಸಿದೆ. ೧೩ರಂದು ಸ್ಕ್ರಾಫ್ ವಲಯದ ಎಲ್ಲಾ ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿ ತಿರುವನಂತಪುರದಲ್ಲಿ ನಡೆಯುವ ಪ್ರತಿಭಟನಾ ಸಂಗಮಕ್ಕೆ ಬೆಂಬಲ ಸೂಚಿಸಲು ಸಭೆ ನಿರ್ಧರಿಸಿದೆ.
ಸಭೆಯಲ್ಲಿ ರಾಜ್ಯ ಅಧ್ಯಕ್ಷ ಫೈಸಲ್ ಕನ್ನಾಂಪರಂಬಿಲ್ ಅಧ್ಯಕ್ಷತೆ ವಹಿಸಿದರು. ಪೋಲ್ಸನ್ ಪುಲ್ಲುವಳಿ, ಆಟಕೋಯ ತಂಙಳ್, ಅಸೀಸ್ ಪಾದಪುರಂ, ರಶೀದ್ ಕಾಯಂಕುಳಂ, ಅಬ್ದುಲ್ ಜಬ್ಬಾರ್ ಎರ್ನಾಕುಳಂ, ಸಜೀರ್ ಪಟ್ಟಾಂಬಿ ಮಾತನಾಡಿದರು. ರಾಜ್ಯ ಕಾರ್ಯ ದರ್ಶಿ ಇಬ್ರಾಹಿಂ ಚೆಮ್ಮನಾಡ್ ಸ್ವಾಗತಿಸಿ, ಕೋಶಾಧಿಕಾರಿ ಶಾಫಿ ಕೊಲ್ಲಂ ವಂದಿಸಿದರು.