ಬದಿಯಡ್ಕದ ಅನ್ನಪೂರ್ಣ ಹೋಟೆಲ್ ಮಾಲಕನಿಗೆ ಕಂಬನಿಯ ವಿದಾಯ
ಬದಿಯಡ್ಕ: ಅಸೌಖ್ಯ ಹಿನ್ನೆಲೆಯಲ್ಲಿ ಪತ್ನಿ ಮೃತಪಟ್ಟ ಮನೋವೇದನೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಹೋಟೆಲ್ ಮಾಲಕರಿಗೆ ಸ್ಥಳೀಯರಿಂದ ಕಣ್ಣೀರ ಕೋಡಿ. ಬದಿಯಡ್ಕದ ಅನ್ನಪೂರ್ಣ ಹೋಟೆಲ್ ಮಾಲಕ ಬಾರಡ್ಕ ಕನಕಪ್ಪಾಡಿ ದುರ್ಗಾ ನಿಲಯ ನಿವಾಸಿ ಇ.ವಿ. ಮಧುಸೂಧನ (54). ನಿನ್ನೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸ್ಥಳೀಯರಿಗೆ ಬಿಟ್ಟುಕೊಡಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಯಿತು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರ ಪತ್ನಿ ಹರಿಣಾಕ್ಷಿಅಸೌಖ್ಯ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ನಿಧನ ಹೊಂದಿದ್ದರು. ಆ ಬಳಿಕ ಮಧುಸೂದನ ಮಾನಸಿಕವಾಗಿ ಕುಗ್ಗಿದ್ದರೆಂದು ಸಹೋದರ ಇ.ವಿ. ಸೂರ್ಯನಾರಾಯಣ ತಿಳಿಸಿದ್ದಾರೆ. ದಿ| ವೆಂಕಟ್ರಮಣ ಭಟ್ರ ಪುತ್ರನಾದ ಮಧುಸೂದನ ತಾಯಿ ಸುಲೋಚನ, ಮಕ್ಕಳಾದ ಎಂ. ನಿಶಾಶ್ರೀ, ಅರುಣ್ ಕುಮಾರ್, ಸಹೋದರಿ ಪ್ರಭಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಪ್ರಕಾಶ್ ಭಟ್, ಸಹೋದರಿ ಜಯಲಕ್ಷ್ಮಿ ಈ ಹಿಂದೆ ನಿಧನಹೊಂದಿದ್ದಾರೆ.