ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯುತ್ ಕಂಬಕ್ಕೆ ತಲೆ ಬಡಿದು ವಿದ್ಯಾರ್ಥಿ ದಾರುಣ ಮೃತ್ಯು

ಕಾಸರಗೋಡು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಲೆ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.

ಕೂಡ್ಲು ಮನ್ನಿಪ್ಪಾಡಿ ಗಣೇಶ್‌ನಗರ ಹೌಸಿಂಗ್ ಕಾಲನಿಯ ಜಿ. ಸುನಿಲ್ ಕುಮಾರ್- ಪ್ರಜಿತ ದಂಪತಿ ಪುತ್ರ, ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಎಸ್. ಮನ್ವಿತ್ (೧೬) ಸಾವನ್ನಪ್ಪಿದ ದುರ್ದೈವಿ.

ನಿನ್ನೆ ಸಂಜೆ ಶಾಲೆ ಬಿಟ್ಟು ಕಾಸರಗೋಡು- ಮಧೂರು ರೂಟ್‌ನಲ್ಲಿ ಸಂಚಾರ ನಡೆಸುತ್ತಿರುವ ಖಾಸಗಿ ಬಸ್‌ನಲ್ಲಿ ಮನ್ವಿತ್ ಮನೆಗೆ ಹಿಂತಿರುಗುತ್ತಿದ್ದಾಗ ದಾರಿ ಮಧ್ಯೆ ನಗರದ ಬಟ್ಟಂಪಾರೆ ಸಿನೆಮಾ ಥಿಯೇಟರ್ ಬಳಿ ಆತನ ತಲೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದಿದೆ. ಗಂಭೀರಗಾಯಗೊಂಡ ಆತನನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ,  ಅದು ಫಲಕಾರಿಯಾಗದೆ ಆತ ಅಸುನೀಗಿದ್ದಾನೆ.

ಮೃತನ ತಂದೆ ಒಮನ್‌ನಲ್ಲಿ ದುಡಿಯುತ್ತಿದ್ದಾರೆ. ಮೃತನು ಹೆತ್ತವರ ಹೊರತಾಗಿ  ಸಹೋದರ ಅಸ್ಸಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ನಂತರ ಇಂದು ಬೆಳಿಗ್ಗೆ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಗೆ ಸಾಗಿಸಿ ಅಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ನಂತರ ಮನೆಗೆ ತರಲಾಯಿತು.

ಮನ್ವಿತ್‌ನ ದಾರುಣ ಸಾವು ಇಡೀ ಊರನ್ನೇ ಶೋಕಸಾಗರದಲ್ಲಿ ಮುಳುಗಿಸು ವಂತೆ ಮಾಡಿದೆ. ಈ ಅಪಘಾತದ ಬಗ್ಗೆ ಕಾಸರಗೋಡು ಪೊಲೀಸರು ಪ್ರಸ್ತುತ ಬಸ್ ಚಾಲಕ ಅವಿನಾಶ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ಸನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page