ಬಾಲಕಿಯ ನಿಗೂಢ ಸಾವು: ಆರೋಪಿಯನ್ನು : ಪಾಣತ್ತೂರಿಗೆ ತಲುಪಿಸಿ ಮಾಹಿತಿ ಸಂಗ್ರಹ
ಕಾಸರಗೋಡು:ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಆರೋಪಿ ಪಾಣತ್ತೂರು, ಬಾಪುಂಗಯದ ಬಿಜು ಪೌಲೋಸ್ (40) ಎಂಬಾತನನ್ನು ಕ್ರೈಂ ಬ್ರಾಂಚ್ ತಂಡ ಪಾಣತ್ತೂರಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದೆ. ಅಗ್ನಿಶಾಮಕದಳದ ಸ್ಕೂಬ ಟೀಮ್ನ ಸಹಾಯದೊಂದಿಗೆ ಪಾಣತ್ತೂರು ಪವಿತ್ರಂಕಯ ಹೊಳೆಯಲ್ಲಿ ಶೋಧ ನಡೆಸಲಾಯಿತು. ಬಾಲಕಿಯ ಮೃತದೇಹವನ್ನು ಜೀಪಿನಲ್ಲಿ ಕೊಂಡೊಯ್ದು ಕಲ್ಲು ಕಟ್ಟಿ ಪವಿತ್ರಂಕಯ ಹೊಳೆಗೆ ತಳ್ಳಿರುವುದಾಗಿ ಬಿಜು ಪೌಲೋಸ್ ಹೇಳಿಕೆ ನೀಡಿದ್ದನು. ಮೃತದೇಹಕ್ಕೆ ಸಂಬಂಧಿಸಿ ಏನಾದರೂ ಸುಳಿವು ಲಭಿಸುವುದೇ ಎಂದು ಪರಿಶೀಲಿಸಲು ಶೋಧ ಆರಂಭಿಸಲಾಗಿದೆ. 2010 ಜೂನ್ 6ರಂದು ಕಾಞಂಗಾಡ್ನ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ವೇಳೆ ಬಾಲಕಿ ನಾಪತ್ತೆಯಾಗಿದ್ದಳು. ಈ ಹಿಂದೆ ಲೋಕಲ್ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಬಾಲಕಿಯ ಹೆತ್ತವರು ಹೈಕೋರ್ಟ್ನ್ನು ಸಮೀಪಿಸಿದ್ದರು. ಈ ವೇಳೆ ಪ್ರಕರಣದ ತನಿಖೆಯನ್ನು ಹೈಕೋರ್ಟ್ನ ರಾಜ್ಯ ಕ್ರೈಂಬ್ರಾಂಚ್ಗೆ ವಹಿಸಿ ಕೊಟ್ಟಿತ್ತು. ಐಜಿಪಿ ಪ್ರಕಾಶ್ರ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಬಿಜು ಪೌಲೋಸ್ನನ್ನು ಇತ್ತೀಚೆಗೆ ಮಡಿಕೇರಿ ಅಯ್ಯಂಗೇರಿ ಯಿಂದ ಸೆರೆಹಿಡಿಯಲಾಗಿತ್ತು.
ಇದೇ ವೇಳೆ ಬಾಲಕಿಯ ಕೊಲೆ ಕೃತ್ಯದಲ್ಲಿ ಓರ್ವ ಬಾರ್ ಮಾಲಕನಿಗೆ ನಂಟು ಇದೆಯೆಂದು ಹೆತ್ತವರು ಹೈಕೋರ್ಟ್ನಲ್ಲಿ ತಿಳಿಸಿದ್ದರು. ಆ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಇದೀಗ ಕಸ್ಟಡಿಯಲ್ಲಿರುವ ಬಿಜು ಪೌಲೋಸ್ನನ್ನು ಸಮಗ್ರ ತನಿಕೆಗೊಳಪಡಿಸಿದರೆ ಈ ಕುರಿತು ಮಾಹಿತಿ ಲಭಿಸಬಹುದೆಂದು ತನಿಖಾ ತಂಡ ನಿರೀಕ್ಷೆಯಿರಿಸಿದೆ.